
ನವದೆಹಲಿ: ಭಾರತೀಯ ಜನತಾ ಪಾರ್ಟಿಯಿಂದ ಹೊರಬಂದ ಬಳಿಕ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪಕ್ಷದ ಕೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ನಿರ್ಗಮನಕ್ಕೆ ಕಾರಣವಾದ ಹಲವು ವಿಚಾರಗಳನ್ನೂ ಅವರು ಬಹಿರಂಗಪಡಿಸಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಣ್ಣಾಮಲೈ, ಕೇಂದ್ರ ನಾಯಕತ್ವದ ಧೋರಣೆ ಹಾಗೂ ತಮಿಳುನಾಡಿನ ಸ್ಥಳೀಯ ರಾಜಕೀಯ ಹಿತಾಸಕ್ತಿಗಳ ಕಡೆಗಣನೆಯೇ ಪಕ್ಷ ತೊರೆಯಲು ಪ್ರಮುಖ ಕಾರಣ ಎಂದಿದ್ದಾರೆ.
ಗುಜರಾತ್ಗೆ ಮಾತ್ರ ಆದ್ಯತೆ ಬೇಡ: AI ಕಂಪನಿಗಳು, ಚಿಪ್ ಮತ್ತು ಸೆಮಿಕಂಡಕ್ಟರ್ ಘಟಕಗಳು ಸೇರಿದಂತೆ ದೊಡ್ಡ ಯೋಜನೆಗಳು ಗುಜರಾತ್ಗೆ ಮಾತ್ರ ಸೀಮಿತವಾಗಬಾರದು. 2030ರ ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ 2036ರ ಒಲಿಂಪಿಕ್ಸ್ನಂತಹ ಯೋಜನೆಗಳಲ್ಲೂ ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ.
ದೆಹಲಿಯ ಸಂಸ್ಕೃತಿಗೆ ವಿರೋಧ: ಅಮಿತ್ ಶಾ ಅವರ ನಿವಾಸದಲ್ಲಿ ತಮಿಳುನಾಡು ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಸಿದ್ದಕ್ಕೆ ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಸಭೆಗಳು ದೆಹಲಿಯಲ್ಲಿ ನಡೆಯುವ ಬದಲು ಅದೇ ರಾಜ್ಯದಲ್ಲೇ ನಡೆಯಬೇಕು ಎಂದು ಅವರು ಹೇಳಿದ್ದಾರೆ.
ಸ್ಥಳೀಯ ನಾಯಕತ್ವಕ್ಕೆ ಆದ್ಯತೆ: ರಾಜ್ಯ ನಾಯಕರಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕು. ತಮಿಳುನಾಡಿನ ಸ್ಥಳೀಯ ನಾಯಕತ್ವ ಹಾಗೂ ಯುವ ಮತದಾರರ ಆಶೋತ್ತರಗಳನ್ನು ರಾಷ್ಟ್ರೀಯ ನಾಯಕತ್ವ ಇನ್ನಷ್ಟು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.


















































































