ಭಾಗ – 612
ಭರತೇಶ ಶೆಟ್ಟಿ ,ಎಕ್ಕಾರು

ಬೀಸಿದ ಸುಳಿಗಾಳಿ ಎಷ್ಟು ಬಿರುಸಾಗಿದ್ದು ಪ್ರಬಲವಾಗಿದೆ ಎಂದರೆ ಮಹಾಪ್ರಳಯವನ್ನು ಎದುರಿಸಿ ಯೋಗ ಶಕ್ತಿಯಿಂದ ಇಂದಿಗೂ ಉಳಿದಿರುವ ಮಹರ್ಷಿ ಬಕದಾಲ್ಭ್ಯರಿಗಾಗಲಿ, ಸೃಷ್ಟಿಕರ್ತ ಬ್ರಹ್ಮನಿಗಾಗಲಿ ನಿಯಂತ್ರಣ ಸಾಧಿಸಿ ಪ್ರತಿರೋಧ ತೋರಲು ಆಗುತ್ತಿಲ್ಲ. ಎತ್ತಿಕೊಂಡು ಹಾರಿಸಿದ ಬಿರುಗಾಳಿ ಎತ್ತಲೊ ಹಾರಿಸಿ ಒಯ್ಯುತ್ತಿದೆ. ಎಲ್ಲಿ ಹೋಗುತ್ತಿದ್ದೇವೆ? ಏನಾಗುತ್ತಿದೆ! ಎಂಬ ಒಂದು ಸುಳಿವೂ ಸಿಗುತ್ತಿಲ್ಲ. ಆ ಮಹಾಗಾಳಿ ನಮ್ಮನ್ನೊಯ್ದು ಯಾವುದೊ ಒಂದು ಲೋಕಕ್ಕೆ ಒಯ್ದಿತು. ಗಾಳಿಯ ಬಿರುಸು ನಿಧಾನವಾದ ಕಾರಣ ಕಣ್ಣು ಬಿಟ್ಟು ನೋಡುವಂತಾಯಿತು. ಆಗ ನಾವಿಬ್ಬರೂ ಎಂಟು ಮುಖದ ಬ್ರಹ್ಮನ ಎದುರು ನಿಂತಿದ್ದೆವು. ನಮ್ಮನ್ನು ನೋಡಿದ ಅಷ್ಟಮುಖ ಬ್ರಹ್ಮ “ನೀವು ಯಾರು? ಯಾಕಾಗಿ ಇಲ್ಲಿ ಬಂದಿದ್ದೀರಿ” ಎಂದು ಪ್ರಶ್ನಿಸಿ ಗರ್ವ ಭಾವದಿಂದ ದಿಟ್ಟಿಸಿದಾಗ ಆ ಸುಳಿಗಾಳಿ ಮತ್ತೆ ಅತಿಪ್ರಬಲವಾದ ಬಿರುಗಾಳಿಯಾಗಿ ನಾವು ಮೂವರನ್ನೂ ಎತ್ತಿಕೊಂಡು ಮತ್ತೆ ಹಾರಿಸಿತು. ಮತ್ತೆ ಮೊದಲಿನಂತೆಯೆ ಹಾರಿ ಎಲ್ಲೊ ಇಳಿಸಿದಾಗ ನಮ್ಮ ಎದುರಲ್ಲಿ ಹದಿನಾರು ತಲೆಯ ಬ್ರಹ್ಮ ನಮ್ಮೆದುರಿಗಿದ್ದನು. ಆತನೂ ಅಹಂ ಭಾವದಿಂದ ದಿಟ್ಟಿಸಿ “ನೀವ್ಯಾರು?” ಎಂದು ಪ್ರಶ್ನಿಸಿದಾಗ ಮತ್ತೆ ಹಾರಿಸಿಕೊಂಡು ಹೋದ ಬಿರುಗಾಳಿ ಮೂವತ್ತೆರಡು ಮುಖದ ಬ್ರಹ್ಮನ ಲೋಕಕ್ಕೆ ನಮ್ಮನ್ನು ಹಾರಿಸಿತು. ಅಲ್ಲಿ ನನ್ನ ಜೊತೆ ಚತುರ್ಮುಖ, ಅಷ್ಟಮುಖ, ಶೋಡಷಮುಖ ಬ್ರಹ್ಮರು ಆಶ್ಚರ್ಯದಿಂದ ಮೂವತ್ತೆರಡು ಮುಖದ ಬ್ರಹ್ಮನನ್ನು ನೋಡುತ್ತಿರುವಾಗ ಆತನೂ ಅಹಂಕಾರದಿಂದ ನಮ್ಮತ್ತ ದೃಷ್ಟಿ ಬೀರಿ “ನೀವು ಯಾರು?” ಎಂದು ಕೇಳಿದಾಗ ಮತ್ತೆ ಗಾಳಿ ನಮ್ಮನ್ನು ಹಾರಿಸಿತು. ಹೀಗೆಯೆ ಮತ್ತೆ ಮತ್ತೆ ಇದೇ ರೀತಿ ಪುನರಾವರ್ತನೆಯಾಗುತ್ತಾ ಸೃಷ್ಟಿಕರ್ತ ಬ್ರಹ್ಮರುಗಳ ತಲೆಗಳು ದ್ವಿಗುಣಗೊಳ್ಳುತ್ತಾ ಅರುವತ್ತನಾಲ್ಕು ಮುಖದ ಬ್ರಹ್ಮ, ನೂರ ಇಪ್ಪತ್ತೆಂಟು ಮುಖದ ಬ್ರಹ್ಮ ಹೀಗೆ ವೃದ್ಧಿಯಾಗುತ್ತಾ ಇತ್ತು. ನಮ್ಮ ಹಾರಾಟ ಮುಂದುವರಿಯುತ್ತಾ ಇತ್ತು. ಹೀಗೆಯೆ ಸಾಗುತ್ತಾ ಬ್ರಹ್ಮನ ವಿರಾಟ್ ರೂಪ ದರ್ಶನ ಸಾಗುತ್ತಾ ಮೂರು ಕೋಟಿ ಮೂವತ್ತೈದು ಲಕ್ಷದ ಐವತ್ತನಾಲ್ಕು ಸಾವಿರದ ನಾಲ್ಕು ನೂರ ಮೂವತ್ತೆರಡು ಮುಖದ ಬ್ರಹ್ಮನ ಲೋಕಕ್ಕೂ ನಾವು ಹಾರಿಸಲ್ಪಟ್ಟೆವು. ಅವನೂ ನಮ್ಮನ್ನು ಗರ್ವ ಭಾವದಿಂದ ನೋಡಿದ ತಕ್ಷಣ ಆತನ ಸಹಿತವಾಗಿ, ನನ್ನನ್ನೂ ಸೇರಿಸಿಕೊಂಡು ಅಷ್ಟೂ ಬ್ರಹ್ಮರನ್ನೂ ಹಾರಿಸುತ್ತಾ ಮಹಾಗಾಳಿ ಮತ್ತೆ ಎತ್ತಲೊ ಹಾರಿಸತೊಡಗಿತು. ಈ ಎಲ್ಲಾ ವೃತ್ತಾಂತದಲ್ಲಿ ಒಂದು ವಿಚಾರ ಸತ್ಯದರ್ಶನವಾಗುತ್ತಿತ್ತು. ಅದೇನೆಂದರೆ ತನಗಿಂತ ಅಧಿಕ ಮುಖಗಳುಳ್ಳ ಬ್ರಹ್ಮರನ್ನು ಕಾಣುತ್ತಿದ್ದಂತೆ ಮೊದಲು ಅಹಂ ಭಾವ ತಳೆದಿದ್ದ ಬ್ರಹ್ಮರುಗಳಿಗೆ ತಮಗಿಂತಲೂ ಅಧಿಕರು ಇದ್ದಾರೆ, ಅವರೆದುರೂ ನಾವೂ ಕನಿಷ್ಠರು ಎಂಬ ಭಾವನೆಗಳು ಪ್ರಕಟಗೊಳ್ಳುತ್ತಾ ಸಾಗುತ್ತಿತ್ತು. ಮತ್ತೊಂದು ಕಡೆ ಸಾಗಿ ಅದಕ್ಕಿಂತಲೂ ದ್ವಿಗುಣ ಮುಖಗಳುಲ್ಲ ಬ್ರಹ್ಮನನ್ನು ಕಂಡಾಗ ಮೊದಲಿನ ಗರ್ವಿ ಬ್ರಹ್ಮನ ಪೂರ್ಣ ಅಹಂ ಇಳಿದು ಹೋಗಿ ದೀನತೆ ಎದ್ದು ಕಾಣಿಸುತ್ತಿತ್ತು. ಇವೆಲ್ಲದುದರ ಮಧ್ಯೆ ನಮಗೆ ಒಂದು ಜಿಜ್ಞಾಸೆ ಮೂಡುತ್ತಿತ್ತು. ಅದೇನೆಂದರೆ ಒಂದು ಲೋಕದಿಂದ ಒಂದು ಲೋಕದ ಹಾರಿಸಲ್ಪಟ್ಟಾಗ ಇದುವೆ ಅಧಿಕ ಎಂಬ ಭಾವನೆ, ತುಸು ಕಾಲಾಂತರದಲ್ಲಿ ಮತ್ತೆ ಇದಕ್ಕಿಂತಲೂ ಅಧಿಕವಾದುದು ಇದೆ ಎಂಬ ಬದಲಾವಣೆ. ಹಾಗಾದರೆ ಸರ್ವಶ್ರೇಷ್ಠತೆಯ ಪರಿಪೂರ್ಣ ರೂಪ ಎಲ್ಲಿದೆ? ಹೇಗಿರಬಹುದು? ನಮಗೆ ಅಂತಹ ಮಹತ್ ವಿರಾಟ್ ರೂಪದ ದರ್ಶನ ಸಿಗಬಹುದೆ? ಎಂಬ ಕೌತುಕ ಕ್ಷಣದಿಂದ ಕ್ಷಣಕ್ಕೆ ಏರತೊಡಗಿತ್ತು. ಆ ಸಮಯಕ್ಕೆ ಮತ್ತೆ ಅದೇ ಮಹಾಶಕ್ತಿಶಾಲಿ ಬಿರಗಾಳಿ ಅಷ್ಟೂ ಬ್ರಹ್ಮರ ಜೊತೆ ನನ್ನನ್ನೂ ಸೇರಿಸಿ ಹಾರಿಸಿತು. ಮತ್ತೆ ಕಣ್ತೆರೆಯಲಾಗದ ವೇಗದ ಬಿರುಗಾಳಿಯ ಸುಳಿಗೆ ಸಿಕ್ಕಿ ಕಣ್ತೆರೆಯಲಾಗದಿದ್ದರೂ ಮನಸ್ಸಲ್ಲಿ ಇದಕ್ಕಿಂತಲೂ ದ್ವಿಗುಣವಾದ ಮುಖಗಳುಳ್ಳ ಬ್ರಹ್ಮನ ದರ್ಶನವಾಗಬಹುದು ಎಂಬ ನಿರೀಕ್ಷೆಯೂ, ಈ ಯಾನ ಇನ್ನೆಷ್ಟು ಮುಂದುವರಿದೀತು ಎಂಬ ಪ್ರಶ್ನೆಯೂ ಮನ ಮಾಡಿತು. ಆದರೆ ಆ ಗಾಳಿ ಮಾತ್ರ ನಾವಷ್ಟೂ ಮಂದಿಯನ್ನು ಒಂದು ವಿಚಿತ್ರವಾದ ಸಾಗರದ ತಡಿಯಲ್ಲಿ ಇಳಿಸಿತು. ಅಲ್ಲೇನು ವಿಶೇಷ ಎಂದು ಕಣ್ತೆರೆದರೆ ಮೊದಲಿನಂತಲ್ಲ. ಸಂಪೂರ್ಣ ವಿಭಿನ್ನ ಲೋಕಕ್ಕೆ ನಾವು ಬಂದು ಇಳಿದಿದ್ದೆವು.
ಮುಂದುವರಿಯುವುದು…




























































