
NEET ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳ ವೇಳೆ ‘ಜೆನ್ ಝಡ್’ ಪೀಳಿಗೆಯ ವಿದ್ಯಾರ್ಥಿಗಳನ್ನು ಕೆಲವರು ದಾರಿ ತಪ್ಪಿಸಲು ಪ್ರಯತ್ನಿಸಿದ್ದರು ಎಂದು ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸಚಿವ ಸ್ಥಾನ ತಮಗೆ ಎಂದಿಗೂ ಮುಖ್ಯವಾಗಿರಲಿಲ್ಲ. ರಾಜೀನಾಮೆ ನೀಡುವ ವಿಚಾರವಾಗಿ ತಾವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದಾಗಿ ಅವರು ತಿಳಿಸಿದ್ದಾರೆ.
ಭುವನೇಶ್ವರದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್, ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ತಾವು ಟೀಕೆಗೆ ಗುರಿಯಾಗಿದ್ದನ್ನು ಉಲ್ಲೇಖಿಸಿದರು. ‘ಜೆನ್ ಝಡ್’ ಯುವಕರು ದೇಶದ ಭವಿಷ್ಯವಾಗಿದ್ದು, ಅವರಿಗೆ ದೊಡ್ಡ ಕನಸುಗಳಿವೆ. ಮುಂದಿನ ದಿನಗಳಲ್ಲಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಇದೇ ವೇಳೆ ರೈರಾಖೋಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಡಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧವೂ ಪ್ರಧಾನ್ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ‘Go Back’ ಘೋಷಣೆಗಳನ್ನು ಕೂಗಿದರೂ ತಮಗೆ ಯಾವುದೇ ಬೇಸರವಿಲ್ಲ. ತಾವು ರೈತನ ಮಗನಾಗಿದ್ದು, ವಾಪಸ್ ಹೋಗಿ ಎಂದರೂ ಮತ್ತೆ ಒಡಿಶಾಕ್ಕೆ ಬರುತ್ತೇನೆ ಎಂದು ಹೇಳಿದರು.
ತಮ್ಮ ವಿರುದ್ಧದ ಪ್ರತಿಭಟನೆಗಳಿಗೆ ಬಿಜೆಡಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಪ್ರಧಾನ್, ತಾವು ಒಡಿಶಾದ ಗೌರವಕ್ಕೆ ಧಕ್ಕೆ ತರುವ ಯಾವುದೇ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಜನರು ತಲೆತಗ್ಗಿಸುವಂತಹ ಕೃತ್ಯವನ್ನು ತಾವು ಎಂದಿಗೂ ಮಾಡುವುದಿಲ್ಲ ಎಂದರು.
ಈ ವೇಳೆ ಬಿಜೆಡಿ ಶಾಸಕ ಹಾಗೂ ಒಡಿಶಾ ವಿಧಾನಸಭೆಯ ಉಪನಾಯಕ ಪ್ರಸನ್ನ ಆಚಾರ್ಯ ಕೂಡ ಉಪಸ್ಥಿತರಿದ್ದರು. ಬಿಜೆಡಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಬೇಕೇ ಎಂಬ ಬಗ್ಗೆ ಪ್ರಸನ್ನ ಆಚಾರ್ಯ ಅವರೊಂದಿಗೆ ಚರ್ಚಿಸಿ, ಅವರ ಸಲಹೆಯ ಬಳಿಕವೇ ಕಾರ್ಯಕ್ರಮಕ್ಕೆ ಬಂದಿದ್ದಾಗಿ ಪ್ರಧಾನ್ ಹೇಳಿದರು.
ಪ್ರಧಾನ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಡಿ ಸಂಬಲ್ಪುರ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಸಚಿವ ರೋಹಿತ್ ಪೂಜಾರಿ, ಅವರ ವರ್ಚಸ್ಸಿಗೆ ಧಕ್ಕೆ ತಂದದ್ದು ಬಿಜೆಡಿಯಲ್ಲ, ಅವರದೇ ಸರ್ಕಾರ ಎಂದು ತಿರುಗೇಟು ನೀಡಿದರು. ಜಂತರ್ ಮಂತರ್ನಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ದೌರ್ಜನ್ಯ ನಡೆಸಿದ್ದರಿಂದಲೇ ಪ್ರಧಾನ್ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ನವೀನ್ ಪಟ್ನಾಯಕ್ ಅವರನ್ನು ಹೊಣೆ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ರೋಹಿತ್ ಪೂಜಾರಿ ಹೇಳಿದರು.

























































