ಸ್ವಾತಂತ್ರ್ಯೋತ್ಸವ ಆಚರಣೆ ಜೊತೆಗೆ
ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ಕಾರ್ಕಳ: ತಾಲೂಕಿನ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉನ್ನತಿ ಚಾರಿಟೇಬಲ್ ಟ್ರಸ್ಟ್ (ರಿ.) ತನ್ನ 5ನೇ ವರ್ಷದ ಸಂಭ್ರಮದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದೆ. ಈ ಸಂಬಂಧ ಆಗಸ್ಟ್ 15, 2026ರ ಶನಿವಾರದಂದು ಬೈಲೂರು ಮೈನ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10:00 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಆರಂಭಗೊಳ್ಳಲಿದ್ದು, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಜರುಗಲಿವೆ. ಈ ಮಹತ್ಕಾರ್ಯಕ್ಕೆ ಸ್ಥಳೀಯರು ಹಾಗೂ ಶಿಕ್ಷಣ ಪ್ರೇಮಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು:
ಸಾಧಕರಿಗೆ ಗೌರವ: ‘ನಮ್ಮೂರ ಸಾಧಕರ ಪರಿಶ್ರಮಕ್ಕೊಂದು ಗೌರವ’ ಶೀರ್ಷಿಕೆಯಡಿಯಲ್ಲಿ ನಾಡಿಗೆ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು.
ವಿದ್ಯಾರ್ಥಿಗಳಿಗೆ ಅಭಿನಂದನೆ: 2025-26ನೇ ಸಾಲಿನ ಎಸ್ಸೆಲ್ಸೆಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಬೈಲೂರು ಭಾಗದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗೌರವ ಸಲ್ಲಿಕೆ.
ಆರ್ಥಿಕ ನೆರವು: ಕಾರ್ಕಳ ತಾಲೂಕಿನ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹಧನ ವಿತರಣೆ.
ಸನ್ಮಾನಿಸಲ್ಪಡುವ ಪ್ರಮುಖ ಸಾಧಕರು:
ಸಂಸ್ಥೆಯು ಈ ಬಾರಿ ವಿವಿಧ ರಂಗಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ 10 ಪ್ರಮುಖ ವ್ಯಕ್ತಿಗಳನ್ನು ಗೌರವಿಸಲು ತೀರ್ಮಾನಿಸಿದೆ. ಕ್ಯಾನ್ಸರ್ ಔಷಧ ಸಂಶೋಧಕರಾದ ಡಾ. ಜಿತೇಂದ್ರ ಕಿಣಿ ಬೈಲೂರು, ಬೈಲೂರು ಆರೂರ್ಸ್ ನರ್ಸಿಂಗ್ ಹೋಮ್ನ ಡಾ. ಶಶಿಕಿರಣ್ ಆಚಾರ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ. ಅರುಂಧತಿ ಶೆಟ್ಟಿ, ನೀರೆಯ ಕಾಷ್ಠಶಿಲ್ಪಿ ಹಾಗೂ ನಾಟಿವೈದ್ಯ ಜನಾರ್ದನ ಆಚಾರ್ಯ, ಕೌಡೂರಿನ ಕೃಷಿಕ ಶಿವಾನಂದ ಶೆಟ್ಟಿ, ನಿವೃತ್ತ ಹೆಡ್ ಕಾನ್ಸ್ಸ್ಟೆಬಲ್ ವಿಜಯ ದೇವಾಡಿಗ, ಶಿಕ್ಷಕ ಮೊಯ್ದಿನ್ ಎಸ್. ಕೆ., ಅಗ್ನಿವೀರ ಶ್ರೀ ಸಾಗರ್ ಆಚಾರ್ಯ, ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಮಣಿಕಂಠ ಹಾಗೂ ರಾಷ್ಟ್ರಮಟ್ಟದ ವೈಟ್ಲಿಫ್ಟಿಂಗ್ ಪಟು ಜೀವಿತಾ ಪೂಜಾರಿ ಈ ವರ್ಷದ ಗೌರವಕ್ಕೆ ಭಾಜನರಾಗಲಿದ್ದಾರೆ.
ಈ ಅರ್ಥಪೂರ್ಣ ಕ್ಷಣಗಳಿಗೆ ಸಾಕ್ಷಿಯಾಗಲು ಊರಿನ ಸಮಸ್ತ ನಾಗರಿಕರು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ‘ಟೀಮ್ ಉನ್ನತಿ’ ಪದಾಧಿಕಾರಿಗಳು ವಿನಂತಿ ಮಾಡಿದ್ದಾರೆ.

























































