ಭಾಗ 606
ಭರತೇಶ್ ಶೆಟ್ಟಿ,ಎಕ್ಕಾರು

ಮಂತ್ರಿಸುತ ಮದನ ಯೋಚಿಸಿ ಒಂದು ತೀರ್ಮಾನಕ್ಕೆ ಬಂದ. ಈಗ ರಾಜಾಜ್ಞೆ ಆಗಿರುವುದು ಚಂದ್ರಹಾಸ ಶೀಘ್ರಾತಿಶೀಘ್ರವಾಗಿ ಅರಮನೆಗೆ ಬರಬೇಕೆಂದು. ಆದರೆ ಈ ವೇಳೆ ಚಂದ್ರಹಾಸ ಹೋಗಿರುವುದು ದೇವಿಯ ದೇವಸ್ಥಾನಕ್ಕೆ. ಹೇಗೂ ದೇವರ ಪೂಜೆ ಮದುವೆಯ ದಿನವೇ ಮಾಡಿಸಲಾಗದೆ ತಡವಾಗಿ ಹೋಗಿಯಾಗಿದೆ. ದೇವರಲ್ಲಿ ಕ್ಷಮಾಪಣೆ ಬೇಡಿ ನಾಳೆಯೂ ಮಾಡಿಸಬಹುದು. ಆದರೆ ಆಗಿರುವ ರಾಜಾಜ್ಞೆ ಮೀರಿದರೆ ತಕ್ಷಣ ಶಿಕ್ಷೆಯಾದೀತು. ವಿಚಾರ ಹೀಗಿರುವಾಗ ನಾನು ದೇವಸ್ಥಾನದತ್ತ ಹೋಗಿ ಚಂದ್ರಹಾಸನನ್ನು ಕುಂತಳದ ಅರಮನೆಗೆ ಕಳುಹಿಸುತ್ತೇನೆ. ಚಂದ್ರಹಾಸನ ಪರವಾಗಿ ನಾನೇ ಇವತ್ತಿನ ಪೂಜೆ ಮಾಡಿಸಿ ಬರುತ್ತೇನೆ. ನಾಳೆ ಚಂದ್ರಹಾಸನಿಂದ ಪೂಜೆ ಮಾಡಿಸಿ ದೇವರ ಸೇವೆಯನ್ನು ಪೂರೈಸಬೇಕು. ಹೀಗೆಂದು ತೀರ್ಮಾನಿಸಿ ಕುದುರೆಯೇರಿ ವೇಗವಾಗಿ ಚಂದ್ರಹಾಸ ಹೋದ ದೇವಸ್ಥಾನದ ದಾರಿ ಹಿಡಿದು ಹೊರಟನು.
ಚಂದ್ರಹಾಸ ಒಬ್ಬನೇ ನಡೆದುಕೊಂಡು ದೇವಳದತ್ತ ಸಾಗುತ್ತಿದ್ದಾನೆ. ಕುದುರೆ ಸವಾರನಾಗಿ ಬಂದ ಮದನ ವಾಸ್ತವ ವಿಚಾರವನ್ನೆಲ್ಲ ತಿಳಿಸಿ, ಚಂದ್ರಹಾಸನನ್ನು ಕುದುರೆಯೇರಿಸಿ ಅರಮನೆಯತ್ತ ಕಳುಹಿಸಿದ. ತಾನು ಹಣ್ಣು ಕಾಯಿ ಹಿಡಿದುಕೊಂಡು ದೇವಾಲಯದತ್ತ ಹೊರಟನು. ಭಾವ ಮೈದುನರಲ್ಲಿ ದೇವರ ಪೂಜೆ ವಿನಿಮಯಗೊಂಡಿತು.
“ಶ್ರೀಹರಿ ನನಗೊಂದೂ ತಿಳಿಯದಾಗಿದೆ. ಎಲ್ಲವೂ ನಿನ್ನಿಚ್ಚೆಯಂತೆಯೇ ನಡೆಯುತ್ತಿದೆ. ನೀನು ಓಡಿಸಿದಲ್ಲಿಗೆ ಓಡುವುದಷ್ಟೇ ನನ್ನ ಕಾಯಕ. ಹೇ ಜಗದ್ರಕ್ಷಕಿ ದೇವೀ! ಕಾಲದ ಕೈಗೊಂಬೆಯಾಗಿ ನಿನ್ನ ಬಳಿ ಬರಬೇಕಾದ ನಿನ್ನ ಕಂದನಾದ ನಾನು ಪಥ ಮಧ್ಯದಲ್ಲೇ ತಿರುಗಿ ಅರಮನೆಯತ್ತ ಹೋಗಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಭೌತಿಕವಾದ ನನ್ನ ಈ ಶರೀರಕ್ಕೆ ರಾಜಾಜ್ಞೆ ಅನುಸರಣೀಯವಾಗಿದೆ. ಆದರೆ ನನ್ನ ಆತ್ಮಕ್ಕೆ ದೇವರಿಗಿಂತ ಮಹತ್ತರವಾದುದು ಯಾವುದೂ ಇಲ್ಲ. ಇಂದಲ್ಲದಿದ್ದರೆ ನಾಳೆಯಾದರು ನಿನ್ನ ಸೇವೆಗೈದು ಪಾವನನಾಗುವ ಯೋಗವನ್ನು ನನಗೆ ಕರುಣಿಸು ತಾಯೇ” ಎಂದು ಪ್ರಾರ್ಥಿಸುತ್ತಾ ಚಂದ್ರಹಾಸ ಕುಂತಳದ ಅರಮನೆಗೆ ಬಂದು ತಲುಪಿದ್ದಾನೆ.
ಕಾಡಿನಲ್ಲಿ ದೈತ್ಯಜೇಡ ಬಲಯುತವಾಗಿ ಅಂಟಿನ ಬಲೆ ಹೆಣೆಯುತ್ತಾ ವಿಸ್ತಾರವಾಗಿ ಬಲೆಯನ್ನು ವಿರಚಿಸುತ್ತದೆ. ತನ್ನ ಬಲಯುತವಾದ ಅಂಟು ಜೊಲ್ಲಿನಿಂದ ಹೆಣೆದ ಬಲೆಯಲ್ಲಿ ಸಿಲುಕುವ ಕೀಟ ಪತಂಗಗಳಿಗೆ ಬಿಡಿಸಿ ಹೋಗಲಾಗದು. ಸುಲಭದಲ್ಲಿ ತನ್ನ ಆಹಾರವಾಗುತ್ತದೆಯೆಂದು. ಆದರೆ ಆ ದಾರಿಯಾಗಿ ಉದ್ದನೆಯ ಕೋಡುಳ್ಳ ಜಿಂಕೆ, ಹರಿಣಗಳು ಓಡಿ ಬಂದರೆ, ಅಥವಾ ಮರದ ರೆಂಬೆ ಕೊಂಬೆ ಮುರಿದು ಬಿದ್ದರೆ ಆ ಸಂದರ್ಭ ಬಲೆಯೇ ಮುದ್ದೆಯಾಗಿ ತಾನು ಹೆಣೆದ ಅಂಟು ಬಲೆಯೊಳಗೆ ದೈತ್ಯ ಜೇಡನೇ ಸಿಲುಕಿ ಸಾಯಬೇಕಾಗುವ ಸಂದರ್ಭ ಸೃಷ್ಟಿಯಾಗುತ್ತದೆ. ಪ್ರಾಕೃತವಾದ ಈ ದೃಷ್ಟಾಂತ ನಿಜ ಜೀವನದಲ್ಲೂ ನಿದರ್ಶನವಾಗಿ ಕಾಣಸಿಗುತ್ತದೆ. ಮನುಷ್ಯನ ದುರಾಸೆಯೆಂಬ ಜೊಲ್ಲು ಪ್ರೇರಣೆ ನೀಡಿ ಹೆಣೆಯುವ ಕುತಂತ್ರ ಎಂಬ ಬಲೆ ಭಗವಂತನೆಂಬ ಜಿಂಕೆಯ ಕೋಡಿಗೋ, ಮುರಿದು ಬೀಳುವ ಮರದ ರೆಂಬೆ ಕೊಂಬೆಗೋ ಸಿಲುಕಿ ಕೃತ ಕುತಂತ್ರ, ಅಪರಾಧಗಳ ಸಿಕ್ಕುಗಳೆಂಬ ಬಲೆಯಲ್ಲಿ ಸಿಕ್ಕಿಕೊಂಡು ಹೊರಬರಲಾಗದೆ ಆ ಕಾರಣದಿಂದಲೇ ಅಂತ್ಯ ಕಾಣುವ ಪ್ರತ್ಯಕ್ಷ ಪ್ರಕರಣಗಳು ಸಾಕಷ್ಟು ಸಂಭವಿಸುತ್ತವೆ. ಈಗ ದುಷ್ಟಬುದ್ಧಿಯೂ ಏನೋ ತಂತ್ರ ಹೆಣೆದು ಚಂದ್ರಹಾಸನನ್ನು ಅಂತ್ಯಗೊಳಿಸಲು ಹಾತೊರೆಯುತ್ತಿದ್ದಾನೆ. ಕಾಯುವುದಕ್ಕೂ, ಕೊಲ್ಲುವುದಕ್ಕೂ ಅತಿಮಾನುಷ ಶಕ್ತಿಗಳಾಗಿ ಲೋಕ ಪಾಲಕರು ಇರುವಾಗ ಮಾನುಷ ಪ್ರಯತ್ನ ಪುರುಷಾರ್ಥದಿಂದ ವಿಮುಖವಾಗಿ ಸಾಗಿದರೆ ಗುರಿ ತಲುಪೀತೇ? ಅಥವಾ ಸ್ವಯಂಕೃತ ಅಪರಾಧಕ್ಕೇ ಗುರಿಯಾದೀತೇ? ದೈವೇಚ್ಚೆಗೆ ಬಿಟ್ಟ ವಿಚಾರ.
ಇತ್ತ ಕುಂತಳದೇಶದ ಮಹಾರಾಜ ಕುಂತಳೇಶನು ಚಂದ್ರಹಾಸನನ್ನು ಆತುರದಲ್ಲಿ ಈಗಲೇ ಬರಬೇಕೆಂದು ಕರೆಸುವ ರಾಜಾಜ್ಞೆ ಹೊರಡಿಸಿದ್ದಾನೆ. ಅರಮನೆಯಲ್ಲಿ ರಾಜಾ ಕುಂತಳೇಶ ಹಾಗು ರಾಜ ಪುರೋಹಿತರಾದ ಗಾವಲರು ಚಂದ್ರಹಾಸ ಬರಬೇಕಾದ ದಾರಿಯನ್ನೇ ಕಾಯುತ್ತಾ ಇದಿರು ನೋಡುತ್ತಿದ್ದಾರೆ.
ರಾಜಾ ಕುಂತಳೇಶನು ಇಳಿಸಂಜೆಯ ಹೊತ್ತು ಪಡುವಣದತ್ತ ವಾಲುತ್ತಿರುವ ದಿನಮಣಿ ಸೂರ್ಯನ ಹೊಂಗಿರಣಗಳಿಗೆ ಮೈಯೊಡುತ್ತಾ ವಾಯುವಿಹಾರಕ್ಕಾಗಿ ಹೊರಟಿದ್ದನು. ಆ ಸಮಯದಲ್ಲಿ ಒಂದು ಘಟನೆ ನಡೆದು ಹೋಯಿತು. ಸ್ವಯಂ ರಾಜನಿಗೇ ಪರಮಾಶ್ಚರ್ಯವಾಗಿ ಹೋಯಿತು. ಕಣ್ಣಾರೆ ಕಂಡರೂ ಮತ್ತೆ ಮತ್ತೆ ಪರಾಂಬರಿಸಿ ನೋಡಿದರೂ ತನ್ನ ಕಣ್ಣುಗಳನ್ನೇ ನಂಬದಾಗಿ ಹೋಗಿದ್ದಾನೆ. ಎಷ್ಟು ಬಾರಿ ಪರಾಮರ್ಷೆ ಮಾಡಿ ನೋಡಿದರೂ ವಿಶ್ವಾಸ ಬರಲಿಲ್ಲ. ಅದೇ ಸತ್ಯ ಎಂದು ತಿಳಿದಾಗ ಮಹಾರಾಜ ಆತಂಕಕ್ಕೊಳಗಾಗಿ ಭಯಭೀತನಾಗಿದ್ದಾನೆ. ಅರಸನೇ ಹೆದರಿಕೊಳ್ಳಲು ಕಾರಣವಾದ ಘಟನೆ ಏನೆಂದರೆ, ಅರಸ ವಾಯುವಿಹಾರಕ್ಕೆ ಹೋಗುತ್ತಿರುವಾಗ….
ಮುಂದುವರಿಯುವುದು..

























































