
ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ರಿ.) ವತಿಯಿಂದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್ಶಿಪ್-2026 ಆಗಸ್ಟ್ 2ರಿಂದ 8ರವರೆಗೆ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಅಮರ ಶ್ರೀ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 600ಕ್ಕೂ ಅಧಿಕ ಆಟಗಾರರು, ತರಬೇತುದಾರರು ಮತ್ತು ಪೋಷಕರು ಭಾಗವಹಿಸುವ ನಿರೀಕ್ಷೆಯಿದ್ದು, ಈ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಿಂದ ಕರಾವಳಿ ಭಾಗದ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದರು.
ಫಿಡೆ (FIDE) ಮಾನ್ಯತೆ ಪಡೆದಿರುವ ಈ ಚಾಂಪಿಯನ್ಶಿಪ್ನಲ್ಲಿ ವಿಜೇತರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶದ ಜೊತೆಗೆ ಕಾಮನ್ವೆಲ್ತ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವೂ ಲಭಿಸಲಿದೆ. ಪಂದ್ಯಾವಳಿಗೆ ಒಟ್ಟು ₹8 ಲಕ್ಷ ಬಹುಮಾನ ಹಾಗೂ ಸುಮಾರು ₹2 ಲಕ್ಷ ಸ್ಟೈಪೆಂಡ್ ನೀಡಲಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ಚೆಸ್ ಪ್ರತಿಭೆಗಳಿಗೆ ಕೊರತೆಯಿಲ್ಲ. ಅಂತಾರಾಷ್ಟ್ರೀಯ ಮಾಸ್ಟರ್ಗಳಾದ ಶರಣ್ ರಾವ್, ವಿಯಾನಿ ಡಿಕುನಾ ಹಾಗೂ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಐಶಾನಿ ಶರ್ಮಾ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸುನಿಲ್ ಆಚಾರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ, ಉಪಾಧ್ಯಕ್ಷೆ ಡಾ. ವಾಣಿ ಎಸ್. ಪಣಿಕರ್ ಹಾಗೂ ಖಜಾಂಚಿ ಕ್ರತಿನ್ ಕುಮಾರ್ ಉಪಸ್ಥಿತರಿದ್ದರು.











































