
ಬೆಳ್ಮಣ್: ಬೋಳ ಹಾಗೂ ಬೆಳ್ಮಣ್ ಭಾಗದ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಬಂಟ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಸಮುದಾಯದ ಒಗ್ಗಟ್ಟಿನ ಪ್ರತೀಕವಾಗಿ ನಿರ್ಮಾಣಗೊಳ್ಳಲಿರುವ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ಸಭಾಭವನದ ನಿವೇಶನ ಅನಾವರಣಗೊಂಡಿರುವುದು ಶ್ಲಾಘನೀಯ ಎಂದು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಬೋಳದ ಮಣ್ಬೆಟ್ಟು ಬಲ್ಯಾರ್ದಡ್ಡು ಬಳಿ ನಿರ್ಮಾಣಗೊಳ್ಳಲಿರುವ ಸಂಘದ ಸಭಾಭವನದ ನಿವೇಶನ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈನ ಹೋಟೆಲ್ ರಾಮ್ದೇವ್ ಮಾಲಕ ಕೆ. ರಘುರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬೇಲಾಡಿ ವಿಟ್ಠಲ ಶೆಟ್ಟಿ, ಮುಂಬೈನ ಹೋಟೆಲ್ ಕೃಷ್ಣ ಪ್ಯಾಲೇಸ್ ಮಾಲಕ ಕೃಷ್ಣ ಶೆಟ್ಟಿ, ಕೃಷ್ಣಧಾಮ ನಂದಳಿಕೆಯ ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ರೂಪರಾಣಿ ಶೋಧನ್ ಕುಮಾರ್ ಶೆಟ್ಟಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಎನ್. ತುಕಾರಾಮ ಶೆಟ್ಟಿ ಅವರು ನಿವೇಶನ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೃಷ್ಣ ರೈ, ಉಪಾಧ್ಯಕ್ಷರಾದ ವಿಕಾಸ್ ಶೆಟ್ಟಿ ಮತ್ತು ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಬೋಳ ಸತೀಶ್ ಶೆಟ್ಟಿ, ಕೋಶಾಧಿಕಾರಿ ಉದಯ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರಿತಾ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಕೋಶಾಧಿಕಾರಿ ಸಂಧ್ಯಾ ಸತೀಶ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಮನೀಶ್ ಶೆಟ್ಟಿ, ಕಾರ್ಯದರ್ಶಿ ಸ್ವರೂಪ್ ಶೆಟ್ಟಿ, ಕೋಶಾಧಿಕಾರಿ ಧೀರಜ್ ಶೆಟ್ಟಿ ಸೇರಿದಂತೆ ವಿವಿಧ ಗ್ರಾಮ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ವಾರ್ಷಿಕ ಮಹಾಸಭೆಯೂ ನಡೆಯಿತು. ಬೋಳ ಮಾರಗುತ್ತು ಸುಭಾಸ್ ಶೆಟ್ಟಿ ಹಾಗೂ ಪ್ರಮೀಳ ಸತೀಶ್ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಶೆಟ್ಟಿ ವಾರ್ಷಿಕ ವರದಿ ಹಾಗೂ ನಿರ್ಣಯ ಮಂಡಿಸಿ ವಂದಿಸಿದರು. ಕೋಶಾಧಿಕಾರಿ ಉದಯ ಶೆಟ್ಟಿ ಆಯ-ವ್ಯಯ ವಿವರ ಮಂಡಿಸಿದರು. ಅಗ್ಗ್ಯೊಟ್ಟು ಬೋಳದ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಗಮನಾರ್ಹವಾಗಿ, ಸಂಘದ ಅಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಅವರು ದಾನವಾಗಿ ನೀಡಿದ 1.57 ಎಕರೆ ಜಾಗದಲ್ಲಿ ಸಭಾಭವನ ನಿರ್ಮಾಣಗೊಳ್ಳಲಿದ್ದು, ಅದೇ ಸ್ಥಳದಲ್ಲಿ ನಿವೇಶನ ಅನಾವರಣ ಕಾರ್ಯಕ್ರಮ ನಡೆಯಿತು.








































