
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ “ಭಾರತವನ್ನು ಮೊಹಮ್ಮದ್ ಘಜ್ನಿ 17 ಬಾರಿ ಲೂಟಿ ಮಾಡಿದ್ದಾನೆ ಎಂದು ಓದಿದ್ದೇವೆ. ಅವರನ್ನು ಬಿಟ್ಟರೆ ದೇವಸ್ಥಾನಗಳನ್ನು ಅತಿ ಹೆಚ್ಚು ಲೂಟಿ ಮಾಡಿರುವವರು ಆರ್ಎಸ್ಎಸ್ ಹಾಗೂ ಬಿಜೆಪಿಯವರು. ದೇವರ ಬಗ್ಗೆ ಇವರು ನಮಗೆ ಪಾಠ ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಸ್ಥಾನದ ಮುಂದೆ ಹುಂಡಿ ಕಳ್ಳರಿದ್ದಾರೆಂದು ಫಲಕ ಹಾಕಬೇಕು ಎಂಬಂತಾಗಿದೆ” ಎಂದು ವ್ಯಂಗ್ಯವಾಡಿದರು.
“ಬಿಜೆಪಿಯವರು ಮಾಡಿಸುವ ಜಾತಿ-ಧರ್ಮದ ಹೆಸರಿನ ಗಲಾಟೆಯಲ್ಲಿ ಜೈಲಿಗೆ ಹೋಗುವವರು ದಲಿತರು, ಶೂದ್ರರು. ಆದರೆ ರಾಮಮಂದಿರ ಲೂಟಿ ಮಾಡಿದವರು ಯಾರು? ದೇವಸ್ಥಾನ ಕಟ್ಟಲು ಹೊರಟವರೇ ಲೂಟಿ ಹೊಡೆದಿದ್ದಾರೆ. ಆದರೂ ಪ್ರಧಾನಿ ಮೋದಿ ತುಟಿ ಬಿಚ್ಚುತ್ತಿಲ್ಲ” ಎಂದು ಪ್ರಶ್ನಿಸಿದರು.
“ನಾನು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವ ಹಿಂದೂ ಧರ್ಮ ಮಹಾತ್ಮ ಗಾಂಧಿ, ವಿವೇಕಾನಂದ, ನಾರಾಯಣ ಗುರು, ಕನಕದಾಸ, ಬಸವಣ್ಣ ಹೇಳುವ ಧರ್ಮ. ಗೋಡ್ಸೆ, ಹೆಡಗೇವಾರ್ ಹೇಳುವ ಹಿಂದೂ ಧರ್ಮ ಪಾಲಿಸಲ್ಲ” ಎಂದರು.
ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರಾದ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಎಲ್. ಹನುಮಂತಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.








































