20 ರೂ. ನೋಟಿನಲ್ಲಿ ‘ಅವಳು ಬೇಗ ಸಾಯಲಿ’ ಬೇಡಿಕೆ

ಹೈದರಾಬಾದ್: ಆಂಧ್ರಪ್ರದೇಶದ ದೇವಾಲಯವೊಂದರಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ ಪತ್ತೆಯಾದ 20 ರೂಪಾಯಿ ನೋಟು ಭಕ್ತರು ಹಾಗೂ ಸಿಬ್ಬಂದಿಯ ಗಮನ ಸೆಳೆದಿದೆ. ನೋಟಿನ ಮೇಲೆ ಬರೆಯಲಾಗಿದ್ದ ಅಸಾಮಾನ್ಯ ಸಂದೇಶ ಅಚ್ಚರಿಗೆ ಕಾರಣವಾಗಿದೆ.
ಈ ಘಟನೆ ಅನಂತಪುರ ಜಿಲ್ಲೆಯ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ತೆರೆಯುವ ವೇಳೆ ಇತರ ಕಾಣಿಕೆಗಳ ಜೊತೆಗೆ ಈ ವಿಶೇಷ ಬರಹ ಹೊಂದಿದ್ದ ಕರೆನ್ಸಿ ನೋಟು ಅಧಿಕಾರಿಗಳ ಕೈಗೆ ಸಿಕ್ಕಿದೆ.
ದೇವಾಲಯದ ಸಿಬ್ಬಂದಿ ನೀಡಿದ ಮಾಹಿತಿಯಂತೆ, ಕಾಣಿಕೆಗಳನ್ನು ಎಣಿಸುವ ಕಾರ್ಯದ ವೇಳೆ ನೋಟಿನ ಮೇಲೆ ಕೈಬರಹದಲ್ಲಿ ಬರೆದಿದ್ದ ಮನವಿಯನ್ನು ಅವರು ಗಮನಿಸಿದ್ದಾರೆ. ಸಾಮಾನ್ಯವಾಗಿ ಭಕ್ತರು ಆರೋಗ್ಯ, ಕುಟುಂಬದ ಒಳಿತು ಅಥವಾ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಆದರೆ ಈ ಬಾರಿ ನೋಟಿನಲ್ಲಿದ್ದ ಸಂದೇಶ ಭಿನ್ನವಾಗಿತ್ತು. “ಸ್ವಾಮಿ, ನನ್ನ ಚಿಕ್ಕಮ್ಮನಿಂದ ನನಗೆ ತುಂಬಾ ಕಿರುಕುಳವಾಗುತ್ತಿದೆ. ದಯವಿಟ್ಟು ಅವಳು ಬೇಗ ಸಾಯುವಂತೆ ಮಾಡಿರಿ” ಎಂಬ ಅರ್ಥದ ಮನವಿ ಅದರಲ್ಲಿ ಬರೆಯಲಾಗಿತ್ತು.
ಈ ವಿಚಿತ್ರ ಬರಹವನ್ನು ಕಂಡ ಭಕ್ತರು ಮತ್ತು ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ.


































