ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ, ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಭಯಮುಕ್ತ ವಾತಾವರಣದಲ್ಲಿ, ಕಾನೂನಿನ ಅರಿವಿನೊಂದಿಗೆ ಮಕ್ಕಳ ಬೆಳವಣಿಗೆ ಅಗತ್ಯ: ಪ್ರವೀಣ್ ನಾಯಕ್

ಮಕ್ಕಳಿಗೆ ಸುರಕ್ಷಿತ, ಗೌರವಯುತ ಮತ್ತು ಭಯಮುಕ್ತ ವಾತಾವರಣದಲ್ಲಿ ಬೆಳೆಯುವ ಹಕ್ಕು ಇದೆ, ಅಲ್ಲದೆ ಕಾನೂನಿನ ಬಗ್ಗೆ ಮೂಲಭೂತ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿದೆ, ಕಾನೂನನ್ನು ಗೌರವಿಸುವುದು, ನಿಯಮಗಳನ್ನು ಪಾಲಿಸುವುದು ಹಾಗೂ ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಎ.ಸಿ.ಜೆ.ಎಂ. ಆದ ಶ್ರೀ ಪ್ರವೀಣ್ ನಾಯಕ್ ಅವರು ದಿನಾಂಕ 19-6-2026 ರಂದು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇದರ 2026-27 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇದರ ಪ್ರಾಂಶುಪಾಲರಾದ ಡಾ. ಮಂಜುನಾಥ್ ಎ. ಕೋಟ್ಯಾನ್ ಮಾತನಾಡುತ್ತಾ ನಾಯಕತ್ವ ಎಂದರೆ ಅಧಿಕಾರವಲ್ಲ ಅದು ಜವಾಬ್ದಾರಿ, ಸೇವೆ ಮತ್ತು ಆದರ್ಶ ವ್ಯಕ್ತಿತ್ವದ ಪ್ರತೀಕವಾಗಿದೆ ಇದನ್ನು ನಾವು ಶಾಲಾ ಹಂತದಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಸಂಚಾಲಕರಾದ ಕೆ. ವೆಂಕಟೇಶ್ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಪ್ರಾಂಶುಪಾಲರಾದ ವೀಣಾ ಶೆಣೈ ಸ್ವಾಗತಿಸಿದರು.
ಈ ಶುಭ ಸಂದರ್ಭದಲ್ಲಿ ಅತಿಥಿ ಗಣ್ಯರಿಂದ ರಜತ ಮಹೋತ್ಸವ ಪೂರೈಸಿದ ಸವಿ ನೆನಪಿಗಾಗಿ ರಜತ ಪ್ರಗತಿ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವಿದ್ಯಾರ್ಥಿಗಳಾದ ಕುಮಾರಿ ದೃಷ್ಟಿ ಹೆಗ್ಡೆ ಇವರು ಇವರು ಕಾರ್ಯಕ್ರಮವನ್ನು ನಿರೂಪಿಸಿ ನಾಗರಾಜ್ ಇವರು ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ತಿನ ಸದಸ್ಯರ ಹೆಸರನ್ನು ವಾಚಿಸಿದರು. ಬೆನಡಿಕ್ಟ್ ಟಾಮ್ ಇವರು ಧನ್ಯವಾದವಿತ್ತರು. ದೈಹಿಕ ಶಿಕ್ಷಣ ಶಿಕ್ಷಕರಾದ ನಿಶಾಂತ್ ಅಂಚನ್ ಇವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ನಾಯಕನಾಗಿ ಆಯ್ಕೆಯಾದ ಮಾಸ್ಟರ್ ಪೃಥ್ವಿ ಬಕುಲ್ ಖೋತ್ ಹಾಗೂ ನಾಯಕಿಯಾಗಿ ಆಯ್ಕೆಯಾದ ಕುಮಾರಿ ಆಂಚಲ್ ಕಿಣಿ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ವಿಶ್ವ ಯೋಗ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಯೋಗದ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


































