
ಮಂಗಳೂರು: ಪುತ್ತೂರಿನ ಕೃಷ್ಣ ಜೆ.ರಾವ್ ವಿರುದ್ಧ ಯುವತಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಜೂನ್ 19ರಂದು ದಿನಾಂಕ ನಿಗದಿಯಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಶುಕ್ರವಾರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ರಾವ್ ಕುಟುಂಬ ಯುವತಿಯನ್ನು ಸ್ವೀಕರಿಸುವ ವಿಶ್ವಾಸವಿದೆ. ಇಬ್ಬರ ನಡುವೆಯೂ ಸಮಾನ ತಪ್ಪಿದ್ದು, ಮದುವೆಯ ಮೂಲಕ ಸಮಸ್ಯೆ ಬಗೆಹರಿದು ಅವರ ಜೀವನ ಸುಖಾಂತ್ಯ ಕಾಣಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಜೂನ್ 10ರಂದು ಹೈಕೋರ್ಟ್ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ಆರೋಪಿ ಪರ ವಕೀಲರು ಸಂಧಾನದ ಪ್ರಸ್ತಾಪ ಮಾಡಿದ್ದು, ಅದರಂತೆ ಜೂನ್ 19ರಂದು ಸಂತ್ರಸ್ತೆ, ಆರೋಪಿ ಹಾಗೂ ಸಂಬಂಧಪಟ್ಟ ಎಲ್ಲರೂ ಮಧ್ಯಸ್ಥಿಕೆ ಕೇಂದ್ರದಲ್ಲಿ ಹಾಜರಾಗುವಂತೆ ಆದೇಶಿಸಲಾಗಿದೆ.
ಇದಲ್ಲದೆ, ಹೈಕೋರ್ಟ್ ಸೂಚನೆಯಂತೆ ಮೊದಲ ತಿಂಗಳ 75 ಸಾವಿರ ರೂ. ಠೇವಣಿ ಇಡಲಾಗಿದ್ದು, ಅದನ್ನು ಸಂತ್ರಸ್ತೆಗೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಇನ್ನೂ 75 ಸಾವಿರ ರೂ. ಪಾವತಿಸುವಂತೆ ಆರೋಪಿಗೆ ನಿರ್ದೇಶನ ನೀಡಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದ್ದು, ಮಧ್ಯಸ್ಥಿಕೆ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

































