
ಇಸ್ಲಾಮಾಬಾದ್: ಫೆಬ್ರವರಿ 4ರಂದು ಭಾರತ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಸಚಿವ ಸಂಪುಟವನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಸೇರಬಾರದು ಎಂಬ ನಿಲುವಿನೊಂದಿಗೆ ಹಾಗೂ ಬಾಂಗ್ಲಾದೇಶದ ಪರವಾಗಿ ನಿಂತಿರುವ ಕಾರಣದಿಂದ ಭಾರತ ತಂಡದ ವಿರುದ್ಧ ಪಂದ್ಯವಾಡದ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಈ ಹೇಳಿಕೆ, ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಪಾಕ್ ತಂಡವು ಫೆ.15ರಂದು ಕೊಲಂಬೋದಲ್ಲಿ ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ಅಧಿಕೃತವಾಗಿ ಮಾಹಿತಿ ನೀಡಲು ನಿರ್ಧರಿಸಿದೆ ಎಂಬ ವರದಿಗಳ ಬೆನ್ನಲ್ಲೇ ಹೊರಬಿದ್ದಿದೆ.
ಇದರೊಂದಿಗೆ ಲೀಗ್ ಪಂದ್ಯವನ್ನು ಕೈಬಿಡಲು ಮುಂದಾಗಿರುವ ಪಾಕ್ ತಂಡಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಭಾರತ ವಿರುದ್ಧದ ಪಂದ್ಯವನ್ನೇ ಹೊರತುಪಡಿಸಿ ಉಳಿದ ಪಂದ್ಯಗಳಿಗೆ ಮಳೆಯ ಅಡ್ಡಿ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ‘ಮೆನ್ ಇನ್ ಗ್ರೀನ್’ ತಂಡಕ್ಕೆ ಸೂಪರ್–8 ಹಂತಕ್ಕೆ ಅರ್ಹತೆ ಪಡೆಯುವುದು ಕಷ್ಟವಾಗಬಹುದು ಎನ್ನಲಾಗುತ್ತಿದೆ.
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದರಿಂದ ವಿಸಿಸಿಯಿಂದ ದಂಡ, ಅಂಕ ನಷ್ಟದ ಭೀತಿ ಎದುರಾಗುವ ಸಾಧ್ಯತೆಯಿರುವ ಪಾಕಿಸ್ತಾನಕ್ಕೆ, ಟೂರ್ನಿಯ ಅವಧಿಯಲ್ಲಿ ಹವಾಮಾನವೂ ಅಡ್ಡಿಯಾಗುವ ಆತಂಕವಿದೆ ಎಂದು ವರದಿಗಳು ಹೇಳುತ್ತಿವೆ.
ಪಾಕ್ ತಂಡ ಫೆ.7ರಂದು ನೆದರ್ಲ್ಯಾಂಡ್ಸ್ ವಿರುದ್ಧ, ಫೆ.10ರಂದು ಅಮೆರಿಕ ವಿರುದ್ಧ ಹಾಗೂ ಫೆ.18ರಂದು ನಮೀಬಿಯಾ ವಿರುದ್ಧ ಪಂದ್ಯಗಳನ್ನು ಆಡಲಿದ್ದು, ಈ ಎಲ್ಲಾ ಪಂದ್ಯಗಳು ಕೊಲಂಬೋದಲ್ಲೇ ನಡೆಯಲಿವೆ.



















