
ಬೆಂಗಳೂರು: ಯುಗಾದಿ ಹಬ್ಬದ ಹೊತ್ತಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ (KMF) ಗ್ಯಾಸ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ವ್ಯತ್ಯಯಗೊಂಡಿದ್ದು, ನಂದಿನಿ ಉತ್ಪನ್ನಗಳ ತಯಾರಿಕೆಗೆ ಅಡಚಣೆ ಉಂಟಾಗಿದೆ.
ಪ್ರತಿ ತಿಂಗಳು ನೂರಾರು ಸಿಲಿಂಡರ್ಗಳನ್ನು ಬಳಕೆ ಮಾಡುವ ಕೆಎಂಎಫ್ ಘಟಕಗಳಿಗೆ ಈಗ ಅಗತ್ಯ ಪ್ರಮಾಣದಲ್ಲಿ ಗ್ಯಾಸ್ ದೊರೆಯುತ್ತಿಲ್ಲ. ಸದ್ಯದ ಸಂಗ್ರಹವು ಇನ್ನೂ ಕೆಲವೇ ದಿನಗಳಿಗೆ ಸಾಕಾಗುವಷ್ಟೇ ಇರುವುದರಿಂದ, ಮಾರ್ಚ್ 20ರೊಳಗೆ ಪೂರೈಕೆ ಆಗದಿದ್ದರೆ ಸಿಹಿ ಹಾಗೂ ಇತರೆ ಉತ್ಪನ್ನಗಳ ಉತ್ಪಾದನೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದ್ದು, ಗ್ಯಾಸ್ ಕೊರತೆ ಮುಂದುವರಿದರೆ ನಂದಿನಿ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಿದೆ.





















































































