
ಬೆಳ್ತಂಗಡಿ: ಜ.20ರಂದು ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿಯಲ್ಲಿ ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಸಾರ್ವಜನಿಕರು ಹಿಡಿದು ಮರಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ದೇವಿಪ್ರಸಾದ್ ಅವರ ಬೈಕ್ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಂಗಳೂರು ಕುಳೂರು ನಿವಾಸಿಗಳಾದ ಮೊಯಿದ್ದಿನ್ ನಾಸೀರ್ ಮತ್ತು ಅಬ್ದುಲ್ ಸಮದ್ ಎಂಬವರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದಾರೆ. ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ವೇಳೆ ಆರೋಪಿಗಳು ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾದರೆಂದು ಹೇಳಲಾಗಿದ್ದು, ಬಳಿಕ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ವೇಣೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಸಮದ್ ಹಾಗೂ ಮೊಯಿದ್ದಿನ್ ನಾಸೀರ್ ವಿರುದ್ಧ BNS ಕಲಂ 303(2) ಮತ್ತು 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದಲ್ಲದೆ ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಾಚು, ನಿಶೀತ್, ನರೇಶ್ ಅಂಚನ್, ರತ್ನಾಕರ, ಸಸ್ತಿಕ್, ದೇವಿಪ್ರಸಾದ್, ಸುಧೀರ್ ಹಾಗೂ ಚಂದಪ್ಪ ಸೇರಿದಂತೆ ಎಂಟು ಜನರ ವಿರುದ್ಧ BNS ಕಲಂ 189(2), 191(2), 191(3), 352, 115(2), 118(1), 351(2) ಮತ್ತು 190 ಅಡಿಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.








