
ಕಾರ್ಕಳ: ಭುವನೇಂದ್ರ ಕಾಲೇಜಿನ ಐಕ್ಯುಎಸಿ ಮತ್ತು ಗಣಕ ವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಮಣಿಪಾಲ ಅಕಾಡೆಮಿಯ ಮರೀನ್ಎ ಐ ವಿಭಾಗವು ಭುವನೇಂದ್ರ ಕಾಲೇಜಿನ ಬಿ.ಸಿ.ಎ. ಮತ್ತು ಬಿ.ಎಸ್ಸಿ ಕಂಪ್ಯೂಟರ್ ತರಗತಿ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ಇಂ ಟೆಲಿಜೆನ್ಸ್ ಕುರಿತ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.
ಮರೀನ್ ಎಐ ಇದರ ಸಿ.ಯು.ಒ. ಹಾಗೂ ಕಾರ್ಯಕ್ರಮದ ಸಂಯೋಜಕರೂ ಆಗಿರುವ ಡಾ. ಸಂತೋಷ್ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅವರು ನಮ್ಮ ವಿಭಾಗ ಹಮ್ಮಿಕೊಂಡ ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತುಂಬ ಪ್ರಯೋಜನವಾಗಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಿಸಿಎ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಿರುವುದರಿಂದ ಇಲ್ಲಿ ಪಡೆದ ತಿಳುವಳಿಕೆ ಮತ್ತಷ್ಟು ಬೆಳೆಯಲು ಕಾರಣವಾಗಬಲ್ಲುದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮರೀನ್ ಎಐಯ ಸಂಚಾಲಕರೂ, ಎಂಐಟಿ, ಮಣಿಪಾಲ ಇಲ್ಲಿನ ಪ್ರೊಫೆಸರ್ ಆಗಿರುವ ಡಾ.ಬಾಲಚಂದ್ರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಐ ಎಲ್ಲವೂ ಆಗಿಬಿಟ್ಟಿದೆ. ಹಾಗಾಗಿ ಅದಕ್ಕೆ ಸಂಬಂಧಪಟ್ಟ ಹೊಸತನದ ಬದಲಾವಣೆಗಳನ್ನು ಕಲಿಯುವ ಅನಿವಾರ್ಯತೆ ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದರು. ಎಐ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹೆಚ್ಚು ಅನುಕೂಲ ಇರುವುದರಿಂದ ಅದರ ತಿಳುವಳಿಕೆ ಇಲ್ಲದೇ ಹೋದರೆ ಅವಕಾಶಗಳು ಕೈ ತಪ್ಪಿ ಹೋಗುತ್ತದೆ.
ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಈ ಕಾರ್ಯಾಗಾರದಿಂದ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಕಾರ್ಯಾಗಾರವನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡುತ್ತಾ ಆಧುನಿಕ ತಂತ್ರಜ್ಞಾನದ ಕೃತಕ ಬುದ್ಧಿಮತ್ತೆಯನ್ನು ಬಳಸುವ ವೈಪರೀತ್ಯದ ಕಾಲಘಟ್ಟದಲ್ಲಿ ನಾವಿರುವಾಗ ಅದಕ್ಕೆ ಸಂಬಂಧಪಟ್ಟ ತರಬೇತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಕೊಡಲೇಬೇಕಾದ ಅನಿವಾರ್ಯತೆ ಇಂದು ನಮಗಿದೆ. ಅದು ಉದ್ಯೋಗದ ದೃಷ್ಟಿಯಿಂದ ತುಂಬ ಪ್ರಯೋಜನಕ್ಕೆ ಬರುವುದರಿಂದ ವಿದ್ಯಾರ್ಥಿಗಳೂ ಎಐಯಲ್ಲಿ ಆಗುವಂತಹ ಹೊಸತನವನ್ನು ಕಲಿಯಲೇಬೇಕು. ಈ ದಿಸೆಯಲ್ಲಿ
ಇವತ್ತಿನ ಕಾರ್ಯಾಗಾರ ತುಂಬ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ನಮ್ಮ ಕ್ರಿಯಾಶೀಲತೆಯನ್ನು ಸಂಪೂರ್ಣವಾಗಿ ಆವರಿಸುವ ಕೃತಕ ತಂತ್ರಜ್ಞಾನದ ಬಳಕೆ ಅತಿಯಾಗಿಯೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ವಿದ್ಯಾರ್ಥಿಗಳಿಗಿದೆ.
ಹೃದಯ ಮತ್ತು ಮನಸಿನ ಭಾಷೆಯಾಗಿ ಭಾವವನ್ನು ತುಂಬುವ ಕೆಲಸವನ್ನು ಮನುಷ್ಯರಷ್ಟೇ ಮಾಡಬಲ್ಲರು. ಅಂತಹ ಭಾವನೆಗಳನ್ನೂ ಉಳಿಸಿಕೊಳ್ಳುವ ಕೆಲಸ ಆಧುನಿಕ ಯುಗದಲ್ಲಿ ಆಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಕಾರ್ಯಕ್ರಮ ಸಂಯೋಜಕಿ ಹಾಗೂ ಉಪನ್ಯಾಸಕಿ ಸ್ವಾತಿ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ನಿಶಾ ಶೆಟ್ಟಿ, ಡಾ. ಅಕ್ಷಯ್ ಕೆ. ಸಿ., ಶ್ರೀಕಾಂತ್ ಶೆಣೈ, ಪ್ರಣವ್ ಭಟ್
ಇವರು,ವಿದ್ಯಾರ್ಥಿಗಳಿಗೆ ಕೃತಕ ತಂತ್ರಜ್ಞಾನದ ಕುರಿತ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿನಿಯರಾದ ಜಾಯ್ಸಿಲ್ ಡಿಸೋಜಾ ಸ್ವಾಗತಿಸಿದರು. ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರಾರ್ಥನಾ ಹೆಗ್ಡೆ ಧನ್ಯವಾದಗೈದರು.



















