
ಬಸವಕಲ್ಯಾಣ : ಮುಂಬೈ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ ಕೋಳ್ಸೆ ಪಾಟೀಲ್ ಭಾನುವಾರ ರಾತ್ರಿ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ‘ಹಿಂದೂ, ಧರ್ಮವೇ ಅಲ್ಲ. ಅದೊಂದು ಬೈಗುಳ ಶಬ್ದ. ಬ್ರಾಹ್ಮಣರು ತಮ್ಮ ಬುದ್ಧಿಯನ್ನು ಬಳಸಿ, ನಮ್ಮಲ್ಲಿ ಒಳಜಗಳ ಹುಟ್ಟಿಸಲು, ನಮ್ಮನ್ನು ಗುಲಾಮರನ್ನಾಗಿಸಲು ಹಿಂದು ಧರ್ಮ ಹುಟ್ಟು ಹಾಕಿದರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪರ್ಷಿಯನ್ ಭಾಷೆಯಲ್ಲಿ ಹಿಂದು ಎಂಬುದರ ಅರ್ಥ ಬೈಗುಳ ಎಂದಿದೆ. ಪರಕೀಯರು ಬೈಗುಳದ ಮೂಲಕ ನೀಡಿದ ಹೆಸರಿದು. ಆದರೆ, ಬ್ರಾಹ್ಮಣರು ತಮ್ಮ ಬುದ್ಧಿ ಬಳಸಿ, ನಮ್ಮಲ್ಲಿ (ಬ್ರಾಹ್ಮಣೇತರರಲ್ಲಿ) ಒಳಜಗಳ ಹುಟ್ಟಿಸಲು ಹಾಗೂ ನಮ್ಮನ್ನು ಗುಲಾಮರನ್ನಾಗಿಸಲು ಹಿಂದು ಪದವನ್ನು ಒಂದು ಧರ್ಮ ಎಂದು ಸಾರಿ ಸಮಾಜವನ್ನು ತಪ್ಪುದಾರಿಗೆಳೆದರು. ಹಿಂದೆ ಹಿಂದು ಎಂಬುದು ಧರ್ಮವೇ ಆಗಿರಲಿಲ್ಲ, ಕೇವಲ ಬ್ರಾಹ್ಮಣ ಧರ್ಮ ಮಾತ್ರ ಇತ್ತು. ಅದನ್ನೇ ಬ್ರಾಹ್ಮಣರು ಧರ್ಮವನ್ನಾಗಿಸಿದರು. ಅವರ ಸಂಖ್ಯೆ ದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿಲ್ಲ. ಬ್ರಾಹ್ಮಣರು ಹೆದರುಪುಕ್ಕರು. ಎಲ್ಲಿಯವರೆಗೆ ನಾವು ಹೆದರುತ್ತೇವೆಯೋ ಅಲ್ಲಿಯವರೆಗೆ ಅವರು ನಮ್ಮನ್ನು ಹೆದರಿಸುತ್ತಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.



















