
ಮಂಗಳೂರು: ಕಂಬಳ ಕರೆಯ ಅಡ್ಡ ಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ ಸುಮಾರು 150ಕ್ಕೂ ಅಧಿಕ ಪದಕ ಪಡೆದು ಚಾಂಪಿಯನ್ ಆದ “ಬೋಳಾರ ಕುಟ್ಟಿ” ಎಂಬ ಕೋಣವು ಶುಕ್ರವಾರ ನಿಧನ ಹೊಂದಿದೆ.
ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ಅವರ ಪೋಷಣೆಯಲ್ಲಿದ್ದ ಕುಟ್ಟಿ 92 ಪದಕವನ್ನು ಪಡೆದಿದ್ದು 2019ರಲ್ಲಿ ಬೋಳಾರ ತ್ರಿಶಾಲ್ ಕೆ ಪೂಜಾರಿ ಅವರು ಕುಟ್ಟಿಯನ್ನು ಖರೀದಿ ಮಾಡಿದ್ದರು. 50ಕ್ಕೂ ಮಿಕ್ಕಿ ಪದಕಗಳನ್ನು ತ್ರಿಶಾಲ್ ಕೆ ಪೂಜಾರಿ ಅವರಿಗೆ ದೊರಕಿಸಿಕೊಟ್ಟ ಕುಟ್ಟಿ ಒಟ್ಟು 150ಕ್ಕೂ ಮೀರಿ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಅಡ್ಡ ಹಲಗೆ ವಿಭಾಗದಲ್ಲಿ ಮಿಂಚಿನ ಓಟದೊಂದಿಗೆ ಚಾಂಪಿಯನ್ ಸ್ಥಾನ ಪಡೆದ ಕುಟ್ಟಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಹಲವು ಬಾರಿ ಪದಕ ಮುಡಿಗೇರಿಸಿಕೊಂಡಿತ್ತು.
ಇದೀಗ ‘ಬೋಳಾರ ಕುಟ್ಟಿ’ ನಮ್ಮನ್ನೆಲ್ಲ ಅಗಲಿದ್ದು ಈ ಕುರಿತು ಮಾತನಾಡಿದ ಬೋಳಾರ ತ್ರಿಶಾಲ್ ಕೆ. ಪೂಜಾರಿ ‘ಬೋಳಾರ ಕುಟ್ಟಿ ನಮ್ಮೆಲ್ಲರ ಹೆಮ್ಮೆಯ ಕೋಣವಾಗಿತ್ತು. 50ಕ್ಕೂ ಅಧಿಕ ಪದಕದ ಜೊತೆಗೆ ಚಾಂಪಿಯನ್ ಗೌರವವನ್ನು ಪಡೆದಿತ್ತು. ಕಳೆದ ವರ್ಷದ ಕಂಬಳದ ವೇಳೆಗೆ ಕೊಂಬಿನಲ್ಲಿ ಗಾಯವಾಗಿದ್ದು ವೈದ್ಯರಲ್ಲಿ ಪರೀಕ್ಷಿಸಿದಾಗ ಅನಾರೋಗ್ಯದ ಬಗ್ಗೆ ತಿಳಿದು ಬಂದಿದ್ದು ಆ ಬಳಿಕ ಕುಟ್ಟಿ ಕಂಬಳ ಕರೆಯ ಓಟ ನಿಲ್ಲಿಸಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



















