ಭಾಗ 339
ಭರತೇಶ್ ಶೆಟ್ಟಿ ಎಕ್ಕಾರ್

ಸಂಚಿಕೆ ೩೩೯ ಮಹಾಭಾರತ
ಕೃಷ್ಣಾರ್ಜುನರ ಶಂಖನಾದವನ್ನುಸರಿಸಿ ಪಾಂಡವರು ಹಾಗು ಸೇನಾ ಪ್ರಮುಖರು ತಮ್ಮ ಶಂಖ ಧ್ವನಿಯ ಜೊತೆ ರಣ ಕಹಳೆ ಮೊಳಗಿಸಿದರು. ಪ್ರತಿಯಾಗಿ ಕೌರವರೂ ಶಂಖ, ಜಾಗಟೆ, ಕಹಳೆ, ನಗಾರಿಗಳ ಜೊತೆ ಆಯುಧಗಳ ಝಳಂಕಾರದ ಸ್ವರವೆಬ್ಬಿಸಿದರು. ಎರಡೂ ಕಡೆಯಿಂದ ಧ್ವನಿಸಿದ ರಣೋತ್ಸಾಹ ದಶದಿಕ್ಕುಗಳನ್ನಾವರಿಸಿ ಪ್ರತಿಧ್ವನಿಸತೊಡಗಿತು. ಈ ರೀತಿ ರಣ ಭೀಕರ ಉತ್ಸಾಹಪೂರಿತ ವಾದನಗಳಾದ ಬಳಿಕ ಪಾಂಡವ ಪಕ್ಷದಿಂದ ಸೇನಾಪತಿ ದೃಷ್ಟದ್ಯುಮ್ನ ಹಾಗೂ ಕೌರವರ ಪಕ್ಷದ ಸೇನಾಪತಿ ಭೀಷ್ಮಾಚಾರ್ಯರು ಯುದ್ದಾರಂಭದ ಸಂಕೇತವಾದ ರಣಕಹಳೆಗಳನ್ನೂದಲು ಅಪ್ಪಣೆಯಿತ್ತರು.
ಅತ್ತ ಪಿತಾಮಹ ಭೀಷ್ಮಾಚಾರ್ಯರು ದುಶ್ಯಾಸನ, ದ್ರೋಣಾದಿಗಳ ರಥರಕ್ಷಣೆಯಲ್ಲಿ ಪಾಂಡವ ಪಕ್ಷದ ಮೇಲೆರಗಿದರು. ಪಾಂಡವ ಪಕ್ಷದಿಂದ ದೃಷ್ಟದ್ಯುಮ್ನ ಭೀಮಸೇನನ ಸೇನಾರಕ್ಷಣೆಯಲ್ಲಿ ಪ್ರತಿದಾಳಿಗೆ ತೊಡಗಿದರು. ಕುರುಕ್ಷೇತ್ರದಲ್ಲಿ ಯುದ್ದಾರಂಭವಾಯಿತು. ಈಗ ಬಾಂಧವ್ಯ, ಪೂಜನೀಯರು, ಹಿರಿಯರು, ಕಿರಿಯರು, ಸಂಬಂಧಿಗಳು ಎಂಬ ಭಾವದ ಭೇದವಿರದೆ ಹೊಡೆಯುತ್ತಾ, ಬಡಿಯುತ್ತಾ, ಕಡಿಯುತ್ತಾ ಯುದ್ದವಾಗತೊಡಗಿದೆ.
ಪರಶುರಾಮ ಶಿಷ್ಯ, ಗಾಂಗೇಯ ಭೀಷ್ಮಾಚಾರ್ಯರು ಆಯುಧಪಾಣಿಯಾಗಿ ನಿಂತರೆ ಗೆಲ್ಲಬಲ್ಲ ಪುರುಷರಿದ್ದಾರೆಯೆ? ಆಕಾಶದಲ್ಲಿ ಒಬ್ಬ ಸೂರ್ಯನಾದರೆ, ಕುರುಕ್ಷೇತ್ರದಲ್ಲಿ ಪ್ರತಿಸೂರಜನಂತೆ ಅವರು ಹೊಳೆಯತೊಡಗಿದರು. ಆಗಸದಲ್ಲಿ ಕವಿದ ಮೋಡದಿಂದ ಧಾರಾಕಾರವಾಗಿ ಮಳೆಸುರಿಯುವಂತೆ ಶರವರ್ಷಗೈಯತೊಡಗಿದರು. ದೃಷ್ಟದ್ಯುಮ್ನನಿಗೆ ಪಾಂಡವ ಸೇನೆಯ ರಕ್ಷಣೆ ಮಾಡುವುದೆ ಮಹತ್ಕಾರ್ಯವಾಯಿತು. ಇತ್ತ ಗದಾಧರ ಭೀಮಸೇನ ರುದ್ರ ಭಯಂಕರನಾಗಿ ಹೋರಾಡುತ್ತಾ ಕುರುಸೇನೆಯನ್ನು ದ್ವಂಸಗೈಯುತ್ತಿದ್ದರೂ, ಭೀಷ್ಮ ಪಿತಾಮಹರ ಕೈಚಳಕ ಮಿಗಿಲಾಗುತ್ತಿದೆ.
ಇದೇ ಸಮಯ ಪಾಂಡವ ಪಕ್ಷಕ್ಕೆ ಸಮಸ್ಯೆಯೊಂದು ತಲೆದೋರಿತು. ತ್ರಿಗರ್ತ ದೇಶದ ಸಂಶಪ್ತಕರು ಪಾಂಡವರಿಗೆ ಯುದ್ದಾಹ್ವಾನ ನೀಡಿದರು. ಇದು ದುರ್ಯೋಧನನ ರಣತಂತ್ರದ ಭಾಗವಾಗಿತ್ತು. ಶಕುನಿಯ ಮಂತ್ರಾಲೋಚನೆಯ ಫಲಶ್ರುತಿಯೂ ಆಗಿತ್ತು. ತಂತ್ರಗಳಿಗೆ ತಂತ್ರಿಯಾದ ಶ್ರೀಕೃಷ್ಣ “ಪಾಂಡವರ ಸಕಲ ಸೇನೆಯೂ ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಹೋರಾಟ ಮುಂದುವರಿಸಲಿ. ನಾನು ಮತ್ತು ಪಾರ್ಥ ಇಬ್ಬರಷ್ಟೆ ತ್ರಿಗರ್ತಾಧಿಪರಾದ ಸಂಶಪ್ತಕರನ್ನು ಎದುರಿಸುತ್ತೇವೆ” ಎಂದು ಹೇಳಿದನು. ಕುರುಕ್ಷೇತ್ರದಲ್ಲಿ ಪ್ರತ್ಯೇಕ ರಣಾಂಗಣವೊಂದು ನಿರ್ಮಾಣಗೊಂಡು, ಕೃಷ್ಣಾರ್ಜುನರು ತ್ರಿಗರ್ತದ ರಾಜರಾದ ಸುಶರ್ಮ, ಸತ್ಯೇಷು, ಸತ್ಯಕರ್ಮ, ಸತ್ಯದೇವ, ಮತ್ತು ಸತ್ಯರಥರೆಂಬ ಐವರು ಸಹೋದರರ ಬಹುಕೋಟಿ ಸಂಖ್ಯೆಯ ಅತಿಬಲ ಸೇನೆಯನ್ನು ಎದುರ್ಗೊಂಡರು. ಕೃಷ್ಣ ಸಾರಥ್ಯದಲ್ಲಿ ಅರ್ಜುನನೊಬ್ಬನು ನಿಂತು ತನ್ನ ಅಕ್ಷಯ ತೂಣಿರದಿಂದ ಸರಸರನೆ ಶರ ಪ್ರಯೋಗ ಮಾಡತೊಡಗಿದಾಗ ಸಂಶಪ್ತಕ ಸೇನೆ ಕಂಗೆಟ್ಟು ಓಡಿತು, ಬಹುಪಾಲು ಹತಪ್ರಾಣವಾಯಿತು. ಸವ್ಯಸಾಚಿ ಎಡಬಲ ಕೈಗಳಿಂದ ಏಕಪ್ರಕಾರವಾಗಿ ಪ್ರಳಯಾಂತಕನಂತೆ ಬಿರುಸಾಗಿ ಬೆಂಕಿ ಮಳೆಯಂತೆ ಅಂಬರದಿಂದ ಅಂಬುಗಳ ಮಳೆಗರೆದಾಗ ತ್ರಿಗರ್ತದ ಸೇನೆ ಸೋತು ದಿಕ್ಕೆಟ್ಟು ಓಡಿ ಹೋಯಿತು. ಕೃಷ್ಣನೊಂದಿಗೆ ವಿಜಯನು ಜಯ ಸಾಧಿಸಿ ಕುರು ಪಾಂಡವರ ಯುದ್ಧದತ್ತ ತಿರುಗಿದರು.
ಕುರುಕ್ಷೇತ್ರ ಪುಣ್ಯಭೂಮಿ ರುಧಿರ ಅಭಿಷೇಚನಕ್ಕೊಳಗಾಗುತ್ತಿದೆ. ಭೀಷ್ಮಾಚಾರ್ಯರು ಬೆಂಬಿಡದೆ ಪಾಂಡವ ಸೇನೆಯ ನಿರ್ನಾಮಗೈಯತೊಡಗಿದ್ದಾರೆ. ಸಹಸ್ರ ಸಹಸ್ರ ಕಿರೀಟಧರ ವಿಕ್ರಮಿಗಳನ್ನು ಸಂಹರಿಸುತ್ತಾ ಮೆರೆಯುತ್ತಿದ್ದಾರೆ. ಶಲ್ಯನು ವಯೋ ವೃದ್ಧನಾದರೂ ಮಹಾಬಲನು ಹೌದು. ತನಗೆದುರಾದ ಮತ್ಸ್ಯದೇಶದ ವಿರಾಟಪುತ್ರ ಉತ್ತರನೊಡನೆ ಕಠಿಣ ಕಾಳಗ ನಿರತರಾಗಿದ್ದಾರೆ. ಬಡಾಯಿ ಕೊಚ್ಚುವ ವೀರನೆಂದು ಅಪವಾದ ಹೊತ್ತಿದ್ದ ಉತ್ತರಕುಮಾರ ಈಗ ದಿಟ್ಟ ಕಾದಾಟವನ್ನು ಮಾಡುತ್ತ ಶಲ್ಯನಿಗೆ ಸವಾಲಾಗಿ ನಿಂತಿದ್ದಾನೆ. ವೀರನಾಗಿ ನಡು ಮಧ್ಯಾಹ್ನದವರೆಗೆ ಕದನಕಲಿಯಂತೆ ಉತ್ತರನು ಮೆರೆದನಾದರೂ, ಕೊನೆಗೆ ಮಾದ್ರೇಶ ಶಲ್ಯನಿಂದ ಹತನಾದನು. ವಿರಾಟನ ಉಳಿದ ಪುತ್ರರಾದ ಶ್ವೇತ, ಶಂಖಾದಿಗಳು ಭೀಷ್ಮಾಚಾರ್ಯರನ್ನೆದುರಿಸಿ ವೀರಸ್ವರ್ಗವನ್ನೇರಿದರು. ದ್ರುಪದ, ದೃಷ್ಟದ್ಯುಮ್ನಾದಿಗಳು, ಭೀಮಸಹಿತ ಪಾಂಡವರು ಕುರುಸೇನೆಯನ್ನು ಪುಡಿಗಟ್ಟುತ್ತಿದ್ದರೂ, ಕುರುಕ್ಷೇತ್ರ ಯುದ್ದದ ಮೊದಲ ದಿನಾಂತ್ಯಕ್ಕೆ ವಿಜ್ರಂಭಿಸಿದವರು ಪಿತಾಮಹ ಭೀಷ್ಮರು. ಪಾಂಡವ ಸೇನೆಯ ಬಲುಭಟರನ್ನು ಮನಬಂದಂತೆ ವಧಿಸಿ ಅಜೇಯರಾಗಿ ಮೆರೆಯತೊಡಗಿದ್ದಾರೆ. ಸೂರ್ಯಾಸ್ತಮಾನದ ಹೊತ್ತಾಯಿತು. ಮೊದಲ ದಿನದ ಯುದ್ದ ಶಂಖನಾದದೊಂದಿಗೆ ನಿಲ್ಲಿಸಲ್ಪಟ್ಟಿತು.
ಶಿಬಿರದಲ್ಲಿ ಮೊದಲ ದಿನದ ಹಿನ್ನಡೆಯ ಕುರಿತಾಗಿ ಅವಲೋಕನ ಸಭೆ ನಡೆದು, ಮರುದಿನದ ಯುದ್ದಕ್ಕಾಗಿ ಯೋಜನೆಗಳ ರೂಪುರೇಷೆ ಸಿದ್ದವಾಗತೊಡಗಿತು.
ಭೀಷ್ಮರ ಸರ್ವತೋಭದ್ರ ವ್ಯೂಹಕ್ಕೆ ಪ್ರತಿಯಾಗಿ ಕ್ರೌಂಚ ವ್ಯೂಹ ಬಲಿದು ಪಾಂಡವರು ಸಿದ್ಧರಾಗಿದ್ದಾರೆ. ವ್ಯೂಹದ ಕೊಕ್ಕಿನಂತೆ ಮುಂಭಾಗದಲ್ಲಿ ಕೃಷ್ಣಾರ್ಜುನರು ಇದ್ದು ಭೀಷ್ಮಾಚಾರ್ಯರನ್ನು ನಿಯಂತ್ರಿಸುವ ಬಗ್ಗೆ ರಣತಂತ್ರ ಮಾಡಿದರು.
ಮುಂದುವರಿಯುವುದು…






















































