
ಹಾಸನ: ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಹಾಸನಾಂಬೆ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದು ಈ ವೇಳೆ ಅವರಿಗೆ ದೇವಿಯ ಬಲಗಡೆಯಿಂದ ಹೂವು ವರವಾಗಿ ಬಿದ್ದಿತು.
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ ಸಲ್ಲಿಸಲಾಯಿತು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದ್ದು ಡಿಕೆಶಿ ಕೂಡ ʻಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರʼ ಪಠಿಸಿದರು. ಇದೇ ಶುಭ ಸಮಯದಲ್ಲಿ ದೇವಿಯ ಬಲಗಡೆಯಿಂದ 2 ಬಾರಿ ಹೂವು ವರವಾಗಿ ಬಿದ್ದಿತು.
ಪೂಜೆ ಬಳಿಕ ಮಾತನಾಡಿದ ಡಿಕೆಶಿ, ನಾನುಂಟು.. ಆ ತಾಯಿ ಉಂಟು ನಮಗೆ, ನಿಮಗೆ, ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.









