
ಬೆಂಗಳೂರು: ಈಗಾಗಲೇ ರಾಜ್ಯಾದ್ಯಂತ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಆದರೆ ಸರ್ವೆ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠವು ಸುಮಾರು 2 ಗಂಟೆಗಳ ವಿಚಾರಣೆ ನಡೆಸಿ ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.
ರಾಜ್ಯ ಒಕ್ಕಲಿಗರ ಸಂಘ, ಅಖಿತ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಸೇರಿದಂತೆ ಹಲವರು ಜಾತಿಗಣತಿ ಸಮೀಕ್ಷೆಯನ್ನು ಪ್ರಶ್ನಿಸಿದ್ದು ಸರ್ಕಾರದ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಸಂವಿಧಾನದ 342 A(3) ವಿಧಿಯನ್ನು ಅರ್ಜಿದಾರರು ಪ್ರಶ್ನಿಸಿಲ್ಲ. ಹಿಂದುಳಿದ ವರ್ಗಗಳ ಕಾಯ್ದೆಯ ಸೆಕ್ಷನ್ 9, 11 ಕ್ಕೂ ತಡೆ ನೀಡುವಂತೆ ಅರ್ಜಿದಾರರು ಕೋರಿಲ್ಲ. ಸರ್ವೆಯಲ್ಲಿ ಯಾವ ತಪ್ಪಿದೆ ಎಂದು ಅರ್ಜಿದಾರರು ಹೇಳಿಲ್ಲ. ಹೀಗಾಗಿ ಸರ್ವೆಗೆ ತಡೆಯಾಜ್ಞೆ ನೀಡಬಾರದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಹೈ ಕೋರ್ಟ್ ಸರ್ಕಾರಕ್ಕೆ ಸರ್ವೆ ನಡೆಸುವ ಅಧಿಕಾರವಿಲ್ಲವೆಂದು ಅರ್ಜಿದಾರರು ಹೇಳಿಲ್ಲ. ಆದರೆ ಸರ್ವೆ ನಡೆಸುತ್ತಿರುವ ರೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಜಾತಿಗಳ ನಡುವೆ ಧರ್ಮವನ್ನು ಸೇರಿಸಿದ್ದಾರೆಂಬ ಆರೋಪವಿದ್ದು ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ಸೂಕ್ತ ವರ್ಗೀಕರಣವಿಲ್ಲ ಎಂಬ ಆರೋಪವಿದೆ ಎಂದು ಹೇಳಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅರವಿಂದ್ ಕಾಮತ್ ಜಾತಿಗಳ ವರ್ಗೀಕರಣವನ್ನೇ ಮಾಡದೇ ಸಮೀಕ್ಷೆ ಮಾಡುತ್ತಿದ್ದಾರೆ. ಬೆಂಗಳೂರಿನ ಶ್ರೀಮಂತರಿರುವ ಮನೆಗೂ ಹೋಗಿ ಸಮೀಕ್ಷೆಯ ಅಗತ್ಯವೇನಿದೆ. ಸರ್ವೆ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಆಯೋಗದ ಪರ ವಾದ ಮಂಡಿಸಿದ ಪ್ರೊ.ರವಿವರ್ಮಕುಮಾರ್ ಈ ಹಿಂದಿನ ಸರ್ವೆಗಳ ಮಾಹಿತಿ ಆಧರಿಸಿ 1561 ಜಾತಿ ಗುರುತಿಸಿದೆ. ಆಯೋಗದ ಸರ್ವೆಯ ಅನುಕೂಲಕ್ಕಾಗಿ 1561 ಜಾತಿ ಗುರುತಿಸಲಾಗಿದ್ದು ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಹೊಸದಾಗಿ ಸೇರಿಸಲಾಗಿದೆ. ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ. 1918 ರಿಂದಲೂ ಸಾಮಾಜಿಕ, ಆರ್ಥಿಕ ಸರ್ವೆಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದಕ್ಕಾಗಿ ಮಾತ್ರವೇ ಮೀಟರ್ ರೀಡರ್ ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕರ್ ಅಂಟಿಸಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಸರ್ವೆ ನಂತರವೇ ಈ ಸ್ಟಿಕರ್ ಭರ್ತಿ ಮಾಡಲಾಗುತ್ತದೆ. ದೇಶದಲ್ಲೇ ಮೊದಲಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಹೈಕೋರ್ಟ್ ಆಧಾರ್ ನಂಬರ್ ಗಳನ್ನು ಪಡೆಯಲು ಕಾರಣವೇನು ? ಸ್ಟಿಕ್ಕರ್ ಗಳನ್ನು ಅಂಟಿಸಿ ಅದನ್ನು ತೆಗೆಯದಂತೆ ಸೂಚಿಸಲು ನಿಮಗಿರುವ ಅಧಿಕಾರವೇನು ? ಎಂದು ಖಾರವಾಗಿ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲ ರವಿವರ್ಮಕುಮಾರ್ ಆಧಾರ್ ನಂಬರ್ ಮಾಹಿತಿ 3ನೇ ವ್ಯಕ್ತಿಗೆ ದೊರಕದಂತೆ ವ್ಯವಸ್ಥೆ ಮಾಡಲಾಗಿದ್ದು ಸಿಸ್ಟಮ್ ಗೆ ಹಾಕಿದ ಬಳಿಕ ಉಳಿದವರಿಗೆ ಸಿಗುವುದಿಲ್ಲ. ಹೀಗಾಗಿ ದುರುಪಯೋಗವಾಗುವ ಪ್ರಶ್ನೆಯಿಲ್ಲ ಎಂದು ಹೇಳಿದರು.
ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಸಮಯಾವಕಾಶದ ಕೊರತೆಯಿಂದಾಗಿ ವಿಚಾರಣೆಯನ್ನು ಸಪ್ಟೆಂಬರ್ 25 (ಇಂದು) ಮುಂದೂಡಿದೆ. ಹೀಗಾಗಿ ಇಂದು ಸರ್ವೆಗೆ ತಡೆ ನೀಡಬೇಕೇ ಬೇಡವೇ ಎಂಬುದನ್ನು ಹೈಕೋರ್ಟ್ ತೀರ್ಮಾನಿಸಿ ಆದೇಶ ಪ್ರಕಟಿಸಲಿದೆ.






















































