
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕ್ಕೇರಿದ್ದು, ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆಯನ್ನು ಹೈಕಮಾಂಡ್ ನಡೆಸುತ್ತಿದ್ದರೆ ಮತ್ತೊಂದೆಡೆ, ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರರನ್ನು ಮುಂದುವರಿಸಬಾರದು ಎಂದು ವಿರೋಧಿ ಬಣ ಪಟ್ಟು ಹಿಡಿದಿದೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು ಎಂದು ವಿಜಯೇಂದ್ರ ಪ್ರಶ್ನಿಸಿದ್ದು ಈ ಮೂಲಕ ಪಕ್ಷದಲ್ಲಿರುವ ತಮ್ಮ ವಿರೋಧಿ ಬಣಕ್ಕೆ ಸಂದೇಶ ಕಳುಹಿಸಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಬಿಜೆಪಿ ಒಳಗೊಳಗೆ ಕುದಿಯುತ್ತಿದೆ. ಅಸಮಾಧಾನಿತರನ್ನು ಸಮಾಧಾನ ಪಡಿಸಲು ನಾನಾ ಕಸರತ್ತು ನಡೆಯುತ್ತಿದೆ. ರಾಜ್ಯ ನಾಯಕರನ್ನು ಕರೆದು ಬುದ್ಧಿವಾದ ಹೇಳಿದ್ದ ಆರ್ಎಸ್ಎಸ್ ನಾಯಕರು, ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡವರನ್ನೂ ಕರೆಸಿಕೊಂಡು ಕಿವಿಮಾತು ಹೇಳಿದ್ದಾರೆ. ಕಳೆದ ವಾರ ಅಸಮಾಧಾನಿತ ತಂಡದ ಪೈಕಿ ಕೆಲವರನ್ನು ಕರೆಸಿಕೊಂಡಿದ್ದ ಆರ್ಎಸ್ಎಸ್ ನಾಯಕರು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವಂತೆ ಬುದ್ಧಿ ಮಾತು ಹೇಳಿದ್ದರು. ಆ ಸಂದರ್ಭದಲ್ಲಿ ಎರಡು ಮೂರು ಮಾದರಿಯ ಸಲಹೆಗಳನ್ನು ಅಸಮಾಧಾನಿತ ಸದಸ್ಯರು ನೀಡಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ, ಸರಿಪಡಿಸಲಾಗದ ಹಂತಕ್ಕೆ ಹೋಗಿರುವ ರಾಜ್ಯ ಬಿಜೆಪಿಯ ಆಂತರಿಕ ಕಲಹವನ್ನು ತಣ್ಣಗಾಗಿಸಲು ಆರ್ಎಸ್ಎಸ್ ಮುಂದಾಗಿದೆ. ಇದರಿಂದ ಅಸಮಧಾನಿತರ ಕೋಪ ತಣ್ಣಗಾಗುತ್ತದೆಯೇ ಅಥವಾ ಇನ್ನಷ್ಟು ಸ್ಪೋಟಗೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.