ಆರೋಗ್ಯ ಮತ್ತು ಮನ ಶಾಂತಿಯ ಪ್ರತೀಕವಾಗಿ ಯೋಗದ ಮಹತ್ವದ ಕಾರ್ಯಕ್ರಮ

ಸಾಣೂರು, ಜೂನ್ 21, 2025: ರಾಜೇಶ್ವರಿ ಶಾಲೆ ಮತ್ತು ಪಿಯು ಕಾಲೇಜು, ಸಾಣೂರಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಆರೋಗ್ಯ ಮತ್ತು ಮನಶ್ಶಾಂತಿಯ ಪ್ರತೀಕವಾಗಿ ಯೋಗದ ಮಹತ್ವವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಆರಂಭವನ್ನು ಶಾಲೆಯ ಗಣಿತ ಶಿಕ್ಷಕಿ ಶ್ರೀಮತಿ ಪ್ರಿಯಾಂಕಾ ಅವರು ಪ್ರಾರ್ಥನೆ ಮೂಲಕ ನಡೆಸಿಕೊಟ್ಟರು. ಶಾಲೆಯ ಪ್ರಾಂಶುಪಾಲರಾದ ಸಚಿನ್ ಕೆ.ಎನ್ ಅವರು ಅತಿಥಿಗಳಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಯೋಗದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿಕೊಂಡು, ತಮ್ಮ ಜೀವನ ಅನುಭವಗಳ ಜತೆಗೆ ಯೋಗದ ದೈನಂದಿನ ಉಪಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದ ಧನ್ಯವಾದ ವಂದನೆಗಳನ್ನು ಶಾಲೆಯ ಮತ್ತೊಬ್ಬ ಗಣಿತ ಶಿಕ್ಷಕಿ ಶ್ರೀಮತಿ ಛಾಯಾ ಅವರು ಅರ್ಪಿಸಿದರು.ಅವರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಾಲೆಯ ಸಂಸ್ಕೃತ ಅಧ್ಯಾಪಕ ಶ್ರೀ ಪದ್ಮನಾಭ ಹೆಗ್ಡೆ ಸಂಪೂರ್ಣ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಯೋಗ ಪ್ರಾತ್ಯಕ್ಷಿಕೆ ಯನ್ನು ಯೋಗ ಶಿಕ್ಷಕರಾದ ಅಶೋಕ್ ಕುಮಾರ್ ಅವರು ನಡೆಸಿಕೊಟ್ಟರು. ವಿವಿಧ ಯೋಗಾಸನಗಳ ಪ್ರದರ್ಶನದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿದಂತಾಯಿತು.
ಕಾರ್ಯಕ್ರಮದ ಕೊನೆಗೆ ಶಾಂತಿಮಂತ್ರದೊಂದಿಗೆ ಸಮಾರೋಪಗೊಂಡ ಈ ಯೋಗ ದಿನಾಚರಣೆ ಕಾರ್ಯಕ್ರಮವು ದೈಹಿಕ ಶಿಕ್ಷಕ ಶ್ರೀ ರಾಜೇಶ್ ಅವರ ಸಂಯೋಜನೆಯಡಿ ಶಿಸ್ತುಬದ್ಧವಾಗಿ ಮತ್ತು ಸೊಗಸಾಗಿ ನೆರವೇರಿತು.






















































