ಬಾಗ- 131
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೨೩೨ ಮಹಾಭಾರತ
ದುರ್ಯೋಧನನ ದುಃಖ ಬಹಳಷ್ಟು ಹೆಚ್ಚಿತು. ಮಾನ ಹೋದ ಮೇಲೆ ಬದುಕುವುದೆ ಬೇಡ ಎಂಬ ಧೃಡ ನಿರ್ಧಾರ ಮಾಡುವ ಹಂತ ತಲುಪಿತು. ದ್ವೈತವನದ ಸೌಂದರ್ಯ ಪಾಂಡವರನ್ನು ನೋಯಿಸಲು ಬರುವಾಗ ಸುಂದರವಾಗಿದ್ದರೆ, ಈಗ ಪ್ರತಿಯೊಂದು ಪ್ರಾಣಿ ಪಕ್ಷಿಗಳ ಸ್ವರ ಇಂಚರವೂ ಅಣಕಿಸುವಂತಿತ್ತು. ನೋವು ನೀಡಲು ಬಂದು ಸಾವಿನ ಬಾಗಿಲು ತಟ್ಟಿ ಬಂದ ಹೊತ್ತು ಅಸಹ್ಯ ವೇದನೆ ನೀಡುತ್ತಿದೆ. ನಮ್ಮ ನೇರ ಸ್ಪರ್ಧಿಗಳೆದುರು ಅಪಮಾನವಾದಾಗ ಅದರ ತೀವ್ರತೆ ನೂರ್ಮಡಿ ಹೆಚ್ಚಾಗಿ ಹುಚ್ಚು ಹಿಡಿಸುವಂತಾಗುತ್ತದೆ. ನಮ್ಮವರೆ ಆದ ಪಾಂಡವರನ್ನು ಅನಾವಶ್ಯಕವಾಗಿ ನೋಯಿಸಿ ಪ್ರತಿಸ್ಪರ್ಧಿಗಳನ್ನಾಗಿ ಕೈಯಾರೆ ರೂಪಿಸಿದೆ. ಈಗ ತನಗಾಗುತ್ತಿರುವ ವೇದನೆಗೆ ನಾನೆ ಕಾರಣ. ಇಷ್ಟಾದ ಮೇಲೆ ಇನ್ನು ಬದುಕಿ ಸಾಧಿಸಲು ನನಗೇನೂ ಉಳಿದಿಲ್ಲ. ಹೀಗೆ ದುರ್ಯೋಧನ ಯೋಚಿಸುತ್ತಿರುವಾಗ ಓಡಿ ಹೋಗಿದ್ದ ಕರ್ಣ ಕಾಡಿನಲ್ಲಿ ಸಿಕ್ಕಿದನು. ಆತನ ಯೋಚನೆ ದುರ್ಯೋಧನ ಗಂಧರ್ವರಲ್ಲಿ ಕಾದಾಡಿ ಗೆದ್ದು ಬಂದಿದ್ದಾನೆ ಎಂದಾಗಿತ್ತು. ಬಂದವನು ಒಂದೆ ಸವನೆ ಕೌರವೇಶ್ವರನ ಸಾಮರ್ಥ್ಯವನ್ನು ಹೊಗಳತೊಡಗಿದನು. ಆಗ ಹತ್ತಿರವಿದ್ದ ಭಾನುಮತಿ ನಡೆದ ವೃತ್ತಾಂತ ವಿವರಿಸಿದಳು. ಆಗ ಸಂಭವಿಸಿಯಾಗಿದ್ದ ಘಟನೆ ದುರ್ಯೋಧನನಿಗೆ ಮತ್ತೊಮ್ಮೆ ಪುನರಾವರ್ತಿಸಿದಂತೆ ಭಾಸವಾಗಿ ಇನ್ನಷ್ಟು ಬೇಸರ ನೀಡಿ ಜಿಗುಪ್ಸೆ ತಂದಿತ್ತಿತು.
“ತಮ್ಮಾ ದುಶ್ಯಾಸನಾ ನೀನು ರಾಜನಾಗು. ಇನ್ನು ನಾನು ಮತ್ತೆ ಹಸ್ತಿನಾವತಿಗೆ ಬರಲಾರೆ. ಈ ಕಾಡಲ್ಲಿ ಪ್ರಾಣ ತ್ಯಾಗ ಮಾಡುವೆ. ಗಂಧರ್ವರ ಜೊತೆ ಯುದ್ದದಲ್ಲಿ ನಾನು ಸಾಯುತ್ತಿದ್ದರೆ ಅದು ಪರಮಸುಖವಾಗಿರುತ್ತಿತ್ತು. ” ಎಂದು ಆಜ್ಞೆ ಮಾಡಿ ತನ್ನ ನಿರ್ಧಾರ ಪ್ರಕಟಿಸಿಯೇ ಬಿಟ್ಟನು.
ಇದನ್ನು ಕೇಳಿದ ಶಕುನಿ “ಅಯ್ಯಾ ನನ್ನ ಕಂದಾ! ಪೆದ್ದನಂತೆ ವ್ಯವಹರಿಸಬೇಡ. ಆದದ್ದು ಆಯಿತು ಮರೆತುಬಿಡು. ಶರೀರದಲ್ಲಿ ಪ್ರಾಣವಿದ್ದರೆ ಬಯಸಿದ್ದನ್ನು ಸಾಧಿಸಬಹುದು. ಆ ಪಾಂಡವರನ್ನು ಮಣಿಸಲು ದಾರಿ ನಾನು ಹುಡುಕುತ್ತೇನೆ” ಎಂದನು.
ಕರ್ಣನೂ ಅದಕ್ಕೆ ತನ್ನ ಅಭಿಮತ ಸೇರಿಸಿದ “ಮಿತ್ರಾ! ಇಲ್ಲಿ ನಡೆದಿರುವುದು ಮೋಸ. ಪಾಂಡವರು ಸುಬಗರಂತೆ ನಮ್ಮ ಆಗಮನ ಅರಿತು ಅರ್ಜುನನ ಮಿತ್ರ ಗಂಧರ್ವ ಚಿತ್ರಸೇನನನ್ನು ಬಳಸಿ ನಮ್ಮನ್ನು ನೋಯಿಸಿದ್ದಾನೆ. ಅವರೇನೂ ನಮಗೆ ಉಪಕಾರ ಮಾಡಿಲ್ಲ. ಅಪಮಾನ ಮಾಡಿದ್ದಾರೆ. ಬಂಧಿಸಿ ಒಯ್ಯುವ ಮೊದಲು ಬಂದು ನಮ್ಮನ್ನು ಕಾಪಾಡುತ್ತಿದ್ದರೆ ಆಗ ನಾವು ಅವರು ಮಾಡಿದ್ದು ಸಹಾಯ ಎಂದು ಒಪ್ಪ ಬಹುದಿತ್ತು. ಈಗ ನಾವು ಅವರಿಂದಾದ ಅಪಮಾನಕ್ಕೆ ಪ್ರತಿಯಾಗಿ ನಮ್ಮ ಗೌರವ ವೃದ್ಧಿಸುವ ಕಾರ್ಯ ಸಾಧನೆ ಮಾಡಬೇಕು. ಸುಯೋಧನ ಗಮನವಿಟ್ಟು ಕೇಳು ಆ ಪಾಂಡವರು ನಮ್ಮನ್ನು ಕೊಲ್ಲುವ ಪ್ರತಿಜ್ಞೆ ಮಾಡಿದ್ದಾರೆ. ನಮ್ಮನ್ನು ಅವರು ಕೊಲ್ಲುವ ಮೊದಲು ಅವರನ್ನು ನಾವು ಕೊಲ್ಲಬೇಕು. ನನ್ನ ಪ್ರತಿಜ್ಞೆ ಕೇಳು ಆ ಅರ್ಜುನನನ್ನು ಸೋಲಿಸಿ ಕೊಲ್ಲದೆ ನಾನು ನನ್ನ ಪಾದ ಯಾರಿಂದಲೂ ತೊಳೆಯಿಸಿ ಕೊಳ್ಳುವುದಿಲ್ಲ” ಎಂದನು.
ಈ ಮಾತು ಕೇಳಿ ದುರ್ಯೋಧನನಿಗೂ ಆಕ್ರೋಶ ಮೂಡಿತು. ಕರ್ಣನ ಪ್ರತಿಜ್ಞೆ ಪರೋಕ್ಷವಾಗಿ ದುರ್ಯೋಧನನ ಮನದಲ್ಲಿ ಹೊಸ ಹುರುಪು ಮತ್ತು ಛಲವನ್ನು ಹುಟ್ಟು ಹಾಕಿತು. ಪರಿಣಾಮ ತಾನು ತಳೆದಿದ್ದ ವೈರಾಗ್ಯ ಭಾವ ತೊರೆದು ನೇರವಾಗಿ ಬಂದು ಹಸ್ತಿನಾವತಿ ಸೇರಿದರು.
ಇವರು ಹಸ್ತಿನಾವತಿಗೆ ಬರುವ ಮೊದಲು ನಡೆದ ವಿಚಾರ ಬಂದು ಮುಟ್ಟಿತ್ತು. ಧೃತರಾಷ್ಟ್ರನಿಗೆ ಅಪಮಾನಕ್ಕಿಂತಲೂ ಮಕ್ಕಳು ಬದುಕಿ ಬಂದದ್ದು ದೊಡ್ಡ ಸಂತೋಷದ ಕಾರಣವಾಗಿತ್ತು. ವಿದುರ, ದ್ರೋಣ, ಭೀಷ್ಮಾದಿಗಳಿಗೆ ಧರ್ಮರಾಯನ ಧರ್ಮ ಬುದ್ದಿ ಮೆಚ್ಚುಗೆಯಾಗಿ ಹೆಮ್ಮೆ ಎನಿಸಿತ್ತು.
ಈಗ ಪಾಂಡವರ ಬಳಿ ಸಂಪತ್ತು ಇರದಿದ್ದರೂ ದೈವಾನುಗ್ರಹ ಸಂಪನ್ನರಾಗಿ ಕೀರ್ತಿ ಸಂಪಾದಿಸಿದ್ದಾರೆ. ಕೌರವರಲ್ಲಿ ತೋರಿಕೆಯ ಅಧಿಕಾರ, ಸಿರಿ ಇದ್ದರೂ ಅಪಕೀರ್ತಿಯೂ, ಕಳಂಕವೂ ತುಂಬಿ ಹೋಗಿದೆ.
ಗೆದ್ದವರ ಕೆಲಸದ ಅನುಕರಣೆ ಮಾಡುವುದು ಲೋಕದ ರೂಢಿ. ಕೆಲದಿನ ಕಳೆದಾಗ ದುರ್ಯೋಧನನಿಗೂ ಧರ್ಮರಾಯನಂತೆ ರಾಜಸೂಯ ಯಾಗ ಮಾಡುವ ಮನಸ್ಸಾಯಿತು. ಆದರೆ ತನ್ನ ವಂಶದಲ್ಲಿ ಆ ಯಾಗ ಮಾಡಿದವ ಬದುಕಿರುವವರೆಗೆ ಮತ್ತೊಬ್ಬ ಮಾಡುವ ಹಾಗಿಲ್ಲ. ಮಾತ್ರವಲ್ಲ ತಂದೆ ಬದುಕಿದ್ದರೂ ಮಾಡಲಾಗದು. ಈ ತೊಡಕುಗಳಿಂದ ಆ ವಿಚಾರ ಕೈಬಿಟ್ಟು ಏನಾದರೂ ಮಾಡಿ ಕೀರ್ತಿ ಸಂಪಾದಿಸಬೇಕೆಂಬ ಉತ್ಕಟ ಅಪೇಕ್ಷೆ ಬಲವಾಗಿ ಬೆಳೆಯತೊಡಗಿತು. ಆಗ ಕ್ಷೇಮಪ್ರದವೂ ಉತ್ತಮ ಫಲದಾಯಕವೂ ಆದ ವೈಷ್ಣವಯಾಗ ಮಾಡಿಸುವುದು ಉತ್ತಮ ಎಂಬ ಸಲಹೆ ಬಲ್ಲವರಿಂದ ಬಂತು.
ವೈಷ್ಣವ ಯಾಗಕ್ಕೆ ಹಿರಿಯರ ಅನುಮತಿ ಪಡೆದು ಸಿದ್ಧತೆ ಆರಂಭವಾಯಿತು. ಯಾಗ ನಿಯಮದಂತೆ ದಿಗ್ವಿಜಯ ಮಾಡಿ ಬರಬೇಕು. ಭೀಷ್ಮಾಚಾರ್ಯರು ಸೇನಾಧಿಪತಿಯಾಗಿದ್ದರೂ ಕರ್ಣ ಮುಂದೆ ಬಂದು ತಾನು ಆ ಕೆಲಸ ಮಾಡಲು ಸಿದ್ಧನಾದನು. ದಿಗ್ದೆಸೆಗಳ ದೇಶಗಳನ್ನು ಗೆದ್ದು ಬರಲು ಸನ್ನದ್ಧನಾಗಿ ನಿಂತನು.
ಮುಂದುವರಿಯುವುದು…
















































