
ಪೊಲೀಸ್ ಅಧಿಕಾರಿ ದಯಾ ನಾಯಕ್ಗೆ ಸಹಾಯಕ ಪೊಲೀಸ್ ಆಯುಕ್ತ (ACP) ಹುದ್ದೆಗೆ ಬಡ್ತಿ ಸಿಕ್ಕಿದ್ದು, ಇದರಿಂದ ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ, ಇಡೀ ಮಹಾರಾಷ್ಟ್ರದಲ್ಲೂ ಸಂಭ್ರಮ ಮನೆ ಮಾಡಿದೆ.
ಮೂಲತಃ ಕರ್ನಾಟಕದ ಕರಕಲ ತಾಲೂಕಿನ ಎಣ್ಣೆ ಹೊಳೆ ಗ್ರಾಮದವರಾದ ದಯಾ ನಾಯಕ್ ಸಾಮಾನ್ಯ ಹಿನ್ನೆಲೆಯಿಂದ ಬಂದು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಧೈರ್ಯದ ನಿರ್ಧಾರಗಳಿಂದ ಗುರುತಿಸಿಕೊಂಡಿದ್ದಾರೆ. 1995 ರಲ್ಲಿ ಮುಂಬೈ ಪೊಲೀಸ್ ಇಲಾಖೆ ಸೇರಿದ ಅವರು, ಕಡಿಮೆ ಅವಧಿಯಲ್ಲೇ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಹೆಸರು ಮಾಡಿದರು.
ದಯಾ ನಾಯಕ್ ಗೂಂಡಾ ಜಗತ್ತಿಗೆ ಸವಾಲೆಸೆದ ಅನೇಕ ಧೈರ್ಯಶಾಲಿ ಕಾರ್ಯಾಚರಣೆಗಳನ್ನು ನಡೆಸಿದ್ದು, 2004ರ ವರೆಗೆ 85ಕ್ಕೂ ಹೆಚ್ಚು ಎನ್ಕೌಂಟರ್ಗಳನ್ನು ಮಾಡಿ, ಮುಂಬೈನ ಅನೇಕ ಕುಖ್ಯಾತ ಗೂಂಡಾಗಳನ್ನು ಶಾಶ್ವತವಾಗಿ ತಡೆದರು. ಇದರಿಂದ ಗೂಂಡಾಗಳಲ್ಲಿ ಭಯದ ಜೊತೆಗೆ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿತು.
ಇತ್ತೀಚೆಗೆ ಮುಂಬೈನ ಡ್ರಗ್ಸ್ ಮಾಫಿಯಾ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದ ದಯಾನಾಯಕ್ ಉಪನಗರಗಳಲ್ಲಿ ಸಕ್ರಿಯವಾಗಿದ್ದ ಮಾದಕವಸ್ತು ಜಾಲಗಳ ಮೇಲೆ ದಾಳಿ ನಡೆಸಿ, ಅನೇಕ ಜಾಲಗಳನ್ನು ಧ್ವಂಸ ಮಾಡಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ ಕೆಲಸ ಮಾಡಿದ ಅವರನ್ನು, ಸಂಘಟಿತ ಅಪರಾಧಗಳ ವಿರುದ್ಧದ ಕಾರ್ಯಾಚರಣೆಗಳಿಗಾಗಿ ಮೆಚ್ಚಲಾಗುತ್ತದೆ.






















































