
ಮಂಗಳೂರು: ನಗರದ ಬಜ್ಪೆ ನಿವಾಸಿ ಸಂಪತ್ ಕುಮಾರ್ ಅವರು ಪ್ರತಿಷ್ಠಿತ ಎಲೆಕ್ಟ್ರಾನಿಕ್ ಮಳಿಗೆಯಿಂದ ದುಬಾರಿ ಐಫೋನ್ ಖರೀದಿ ಮಾಡಿದ್ದು ಖರೀದಿ ಮಾಡಿದ ಕೆಲವು ದಿನಗಳಲ್ಲಿ ಆ ಫೋನ್ ನ ಡಿಸ್ಪ್ಲೇ ಹಾಳಾಗಿತ್ತು. ಖರೀದಿಸಿದ ಮಳಿಗೆಗೆ ಹೋಗಿ ಸರ್ವಿಸ್ ಸೆಂಟರ್ ಗೆ ಅದನ್ನು ಕೊಡಲು ಹೇಳಿದಾಗ ಅದರಂತೆ ಬಲ್ಮಠದ ಸರ್ವಿಸ್ ಸೆಂಟರ್ ಗೆ ಅದನ್ನು ರಿಪೇರಿಗೆ ನೀಡಿದ್ದರು. ಆದರೆ ಮೊಬೈಲ್ ಫೋನ್ ವಾರಂಟಿ ಕಾಲಮಿತಿಯೊಳಗೆ ಇಲ್ಲವಾದ್ದರಿಂದ ಉಚಿತವಾಗಿ ರಿಪೇರಿ ಆಗುವುದಿಲ್ಲ ಎಂದು ಹೇಳಿ ರಿಪೇರಿಗೆ ದೊಡ್ಡ ಮೊತ್ತ ಹೇಳಿದ್ದಲ್ಲದೆ ಸ್ವಲ್ಪಕಾಲ ಅದನ್ನು ಇಟ್ಟುಕೊಂಡು ಇದು ಸರಿಪಡಿಸಲಾಗದ ದೋಷ ಎಂದು ಮೊಬೈಲ್ ವಾಪಸ್ ನೀಡಿದ್ದರು.
ಈ ಕುರಿತು ಸಂಪತ್ ಕುಮಾರ್ ಕಂಪನಿಗೆ ಹಲವು ಬಾರಿ ಈಮೇಲ್ ಗಳನ್ನು ಕಳಿಸಿದ್ದರೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಕಾರಣ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ಆಪಲ್ ಕಂಪನಿಯವರು ಹಾಜರಾಗಿ ಫೋನ್ ಖರೀದಿ ಮಾಡಿ ಒಂದು ವರ್ಷ ಕಳೆದದ್ದರಿಂದ ಫೋನ್ ರಿಪೇರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.
ದೂರುದಾರರ ಅಹವಾಲು ಮತ್ತು ಪ್ರತಿವಾದಿಗಳ ಪ್ರತಿರಕ್ಷೆಯನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯವು ಐಫೋನ್ ಬಾಬ್ತು 81,800 ಜೊತೆಗೆ ಬಡ್ಡಿ ಸಮೇತ ದೂರುದಾರರಿಗೆ ಕೊಡಬೇಕೆಂದು ಮಾತ್ರವಲ್ಲದೆ ದಾವೆ ಖರ್ಚು ಹಾಗೂ 10,000 ರೂ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.






