
ಮಂಗಳೂರು: ಏಪ್ರಿಲ್ 16 ರಂದು ತಡರಾತ್ರಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಇದೀಗ ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಳೆಯನ ಜೊತೆಗೆ ಮುನಿಸಿಕೊಂಡು ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಸಾಮೂಹಿಕ ಬಲಾತ್ಕಾರ ಮಾಡಿದ್ದು, ಮಂಗಳೂರಿನ ಸ್ಥಳೀಯ ಆಟೋ ಚಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ.
ಮುಲ್ಕಿ ನಿವಾಸಿ 10 ವರ್ಷಕ್ಕಿಂತ ಹೆಚ್ಚು ಕಾಲ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38), ಕುಂಪಲ ನಿವಾಸಿ ಇಲೆಕ್ಟಿಷಿಯನ್ ಕಾರ್ಯನಿರ್ವಹಿಸುವ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮತ್ತೋರ್ವ ಗೆಳೆಯ ಮಣಿಯನ್ನು ಬಂಧಿಸಲಾಗಿದೆ.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರು ಎನ್ನುವ ಊರು ದಾಟಿ ಸಾಗಿದಾಗ ಇಳಿಜಾರಿನಂತಿರೋ ಬಂಗ್ಲೆ ಕೊಟ್ಟಾರಿಮೂಲೆ ಎನ್ನುವ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಮಂಗಳೂರಿಗರನ್ನ ಅಕ್ಷರಶಃ ಬೆಚ್ಚಿ ಬೀಳಿಸಿದೆ. ಮುನ್ನೂರು ಗ್ರಾಮದ ರಾಜೇಶ್ ಎಂಬವರ ಮನೆಯ ಬಾಗಿಲು ಬಡಿದಿದ್ದು ಮನೆಯವರು ಹೊರಗೆ ಬಂದು ನೋಡಿದಾಗ ಯುವತಿಯೊಬ್ಬಳು ನಶೆಯಲ್ಲಿದ್ದು, ಕಣ್ಣೀರು ಹಾಕುತ್ತಲೇ ಮನೆಯವರ ಬಳಿ ನೀರು ಕೇಳಿದ್ದಾಳೆ. ನೀರು ಕೇಳಿದ ತಕ್ಷಣ ಆಕೆ ಪ್ರಜ್ಞೆ ತಪ್ಪಿದ್ದು, ಸೇರಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಯುವತಿಯ ಕೈ ಮತ್ತು ಕತ್ತಿನ ಮೇಲೆ ಗಾಯಗಳಿದ್ದು, ವಿಪರೀತ ಮದ್ಯ ಸೇವಿಸಿ ನಶೆ ಹೆಚ್ಚಾಗಿ ಪ್ರಜ್ಞೆ ತಪ್ಪಿದ್ದಳು. ಬಳಿಕ ಸ್ಥಳೀಯರು ನೀರು ಕುಡಿಸಿ ಎಬ್ಬಿಸಿ ವಿಚಾರಿಸಿದಾಗ ನಡೆದ ಘಟನೆಯ ಕುರಿತು ಮಾಹಿತಿ ನೀಡಿದ್ದಾಳೆ. ತಕ್ಷಣ ಪೊಲೀಸರು ಆಕೆಯನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಯುವತಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರೋದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ:
ನಿನ್ನೆ ಸಂಜೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಗೆಳೆಯರ ಜೊತೆ ಮುನಿಸಿಕೊಂಡಿದ್ದಳು. ಇದರಿಂದ ಬೇಸರಗೊಂಡ ಯುವತಿ ಉಪ್ಪಳದಲ್ಲಿ ಮಂಗಳೂರು ತೆರಳುವ ರೈಲನ್ನೇರಿ ಉಪ್ಪಳ ದಾಟಿ ರೈಲು ಸೋಮೇಶ್ವರದ ಉಳ್ಳಾಲ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲಿನಿಂದ ಇಳಿದು ನಿಲ್ದಾಣದಲ್ಲೇ ಕುಳಿತಿದ್ದಳು. ಅಲ್ಲೇ ರಿಕ್ಷಾ ಚಾಲಕರಾಗಿದ್ದ ಮಂಗಳೂರಿನ ಕುಂಪಲ ನಿವಾಸಿಯೊಬ್ಬ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಕಷ್ಟಸುಖ ಮಾತನಾಡಿಸಿ, ಕೆಲಸ ಕೊಡಿಸುವುದಾಗಿ ನಂಬಿಸಿರುವ ಮಾಹಿತಿಯಿದೆ. ಅದರಂತೆ ಯುವತಿಯನ್ನು ರಿಕ್ಷಾದಲ್ಲಿ ಕರೆತಂದು ಮುನ್ನೂರು ರಾಣಿಪುರದ ಋಷಿವನ ಮಾರ್ಗವಾಗಿ ನೇತ್ರಾವತಿ ನದಿ ತೀರದತ್ತ ಕೊಂಡೊಯ್ದಿದ್ದಾರೆ.
ಅಲ್ಲಿ ತನ್ನ ಗೆಳೆಯರನ್ನು ಕರೆಸಿದ ರಿಕ್ಷಾ ಚಾಲಕ ಕಾರಿನಲ್ಲಿ ಯುವತಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಸಾಮೂಹಿಕವಾಗಿ ಬಲಾತ್ಕಾರ ನಡೆಸಿದ್ದಾರೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟ ಗ್ಯಾಂಗ್ ವಾಪಸ್ಸು ತೆರಳಿದೆ. ಅಸ್ವಸ್ಥಳಾಗಿದ್ದ ಯುವತಿ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ ಹಿನ್ನೆಲೆಯಲ್ಲಿ ಹೊಟ್ಟೆಯುರಿ ತಡೆದುಕೊಳ್ಳಲಾರದೆ, ತಡರಾತ್ರಿ 1.30 ಸುಮಾರಿಗೆ ಮನೆಗಳನ್ನು ಹುಡುಕುತ್ತಾ ನೆರೆಯ ಮನೆಯೊಂದಕ್ಕೆ ತೆರಳಿ ನೀರು ಕೇಳಿದ್ದಾಳೆ. ಯುವತಿಯನ್ನು ಉಪಚರಿಸಿ ನೀರು ಕುಡಿಸಿ ಹರಿದ ಬಟ್ಟೆಗಳ ಮೇಲೆ ಶಾಲನ್ನು ಹೊದಿಸಿದ್ದಾರೆ. ಅಲ್ಲದೆ ಕುತ್ತಿಗೆ ಮತ್ತು ಕೈಗಳ ಭಾಗದಲ್ಲಿ ಗಾಯಗಳನ್ನು ಗಮನಿಸಿದ್ದಾರೆ. ಮೇಲ್ನೋಟಕ್ಕೆ ಸಾಮೂಹಿಕ ಬಲಾತ್ಕಾರ ಎಂಬುದಾಗಿ ಗಮನಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮಾಡಿದ ಸಾಕ್ಷ್ಯಾಧಾರದ ಮೇಲೆ ಆಟೋ ಚಾಲಕ ಪ್ರಭುರಾಜ್ ಬಂಧನವಾಗಿದೆ.



