
ವಿಶ್ವಾಮಿತ್ರರ ಜೊತೆ ಮಿಥಿಲೆಗೆ ಹೊರಟ ರಾಮಲಕ್ಷ್ಮಣರು ಅರಣ್ಯ ಮಧ್ಯದ ಪಾಳು ಬಿದ್ದ ಆಶ್ರಮವನ್ನು ಕಂಡು ವಿಶ್ವಾಮಿತ್ರರಲ್ಲಿ ಪ್ರಶ್ನಿಸಿದಾಗ ಗೌತಮ ಮತ್ತು ಅಹಲ್ಯೆಯ ಕಥೆಯನ್ನು ವಿವರಿಸುತ್ತಾ ಅಹಲ್ಯೆಯು ಶಾಪಕ್ಕೊಳಗಾದ ತಾಣವನ್ನು ತೋರಿಸುತ್ತಾರೆ. ಅಲ್ಲಿ ಶ್ರೀರಾಮನಿಂದ ಅಹಲ್ಯೆಯ ಶಾಪ ವಿಮೋಚನೆಯಾಗುತ್ತದೆ. ಅಲ್ಲಿಂದ ಮಿಥಿಲೆಗೆ ತೆರಳಿದ ಅವರು ಜನಕ ಮಹಾರಾಜನ ಆಸ್ಥಾನದಲ್ಲಿದ್ದ ಶಿವಧನುಸ್ಸನ್ನು ರಾಮನು ಎತ್ತಿದಾಗ ಅದು ತುಂಡಾಗುತ್ತದೆ. ಅಸಂಭವಾದುದನ್ನು ಶ್ರೀರಾಮ ಸಾಧಿಸಿದ ಅನ್ನುವ ಆನಂದದಿಂದ ಅಯೋಧ್ಯೆಯ ದಶರಥ ಮಹಾರಾಜರನ್ನು ಬರಮಾಡಿಕೊಂಡು ಶ್ರೀರಾಮ ಸೀತೆಯ ವಿವಾಹ ನೆರವೇರುತ್ತದೆ ಎಂಬುದಾಗಿ ಸ್ವಾರಸ್ಯಕರವಾದ ಉಪಕತೆಗಳೊಂದಿಗೆ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ತಮ್ಮ ಉಪನ್ಯಾಸದಲ್ಲಿ ಪ್ರಸ್ತುತಪಡಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೫ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ಚತುರ್ಥ ಸೋಪಾನ ‘ಸಾಕೇತದ ಸಂಭ್ರಮ’ ಎಂಬ ವಿಷಯದ ಕುರಿತು ಎಪ್ರಿಲ್ ೧೨ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಮತ್ತು ಪ್ರೊ.ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ‘ಮಣಿ ಮುಕುಟ’ ಎಂಬ ಕವನ ಸಂಕಲನದ ಗೌರವ ಪ್ರತಿಯನ್ನು ಶ್ರೀಮತಿ ಮಾಲತಿ ವಸಂತರಾಜ್ ಅವರು ಎಲ್ಲರಿಗೂ ವಿತರಿಸಿದರು. ಕು . ಶಾರ್ವರಿ ಪ್ರಾರ್ಥಿಸಿದರು. ಡಾ. ಸುಮತಿ ಪಿ.ಯವರು ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ ಗೋಖಲೆಯವರು ವಂದಿಸಿದರು.