“ಬಿಎಸ್ ವೈ ಕುಟುಂಬವನ್ನು ಹೊರಗೆ ಇಡೋವರೆಗೂ ನಾನು ಬಿಡೋದಿಲ್ಲ” : ಯತ್ನಾಳ್

ಬೆಂಗಳೂರು: 2ನೇ ಬಾರಿ ಬಿಜೆಪಿಯಿಂದ ಉಚ್ಛಾಟನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ಬಿಎಸ್ವೈ ಕುಟುಂಬವನ್ನು ನಾನು ಹೊರಗೆ ಇಡೋವರೆಗೂ ಬಿಡೋದಿಲ್ಲ ಎಂದು ಶಪಥ ಮಾಡಿದ್ದಾರೆ.
ನಾನು ಮತ್ತೆ ದೆಹಲಿಗೆ ಹೋಗಿ ಮರುಪರಿಶೀಲನೆಗೆ ಮನವಿ ಮಾಡಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡಿ ಇಡೀ ರಾಜ್ಯ ಸುತ್ತುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವವರು ಯಾರೂ ಇಲ್ಲ. ಉ.ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತು ಪಡಿಸಿ ಎಲ್ಲಾ ಸಂಸದರೂ ನಮ್ಮ ಪರ ಇದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.



















