
ಉಡುಪಿ: ಕರಾವಳಿಯ ಯಾತ್ರಾರ್ಥಿಗಳು ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಉಡುಪಿಯಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ ಫೆಬ್ರವರಿ 14ರ ಮಧ್ಯಾನ 1 ಗಂಟೆ ಸುಮಾರಿಗೆ ಅವಕಾಶ ನೀಡಲಾಗಿದ್ದು ಆಶ್ಚರ್ಯವೆಂದರೆ ಕೇವಲ 15 ನಿಮಿಷಗಳಲ್ಲೇ ಎಲ್ಲಾ ಸೀಟುಗಳು ಭರ್ತಿಯಾಗಿದೆ.
ಉಡುಪಿಯಿಂದ ಪ್ರಯಾಗ್ ರಾಜ್ ಗೆ ರೈಲು ಬುಕ್ಕಿಂಗ್ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲಿಂದ ವಾಪಸ್ ಬರುವ ರೈಲಿನ ಟಿಕೆಟ್ ಬುಕಿಂಗ್ ಅವಕಾಶ ನೀಡಿರಲಿಲ್ಲ. ಹೀಗಾಗಿ ಬಹುತೇಕರು ಗೊಂದಲಕ್ಕೊಳಗಾಗಿದ್ದು ಬಳಿಕ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಬೆಳೆಸಿದ ಫಲವಾಗಿ ರಾತ್ರಿ 8 ಗಂಟೆ ಸುಮಾರಿಗೆ ಬುಕಿಂಗ್ ಗೆ ಅವಕಾಶ ನೀಡಲಾಗಿದ್ದು ಆದರೆ ಆ ವೇಳೆಗೆ ರೈಲು ನಿಲ್ದಾಣದ ಬುಕಿಂಗ್ ಕೌಂಟರ್ಗಳು ಮುಚ್ಚಿದ್ದವು. ಹೀಗಾಗಿ ಆನ್ಲೈನ್ ನಲ್ಲಿ ಮಾತ್ರ ಅವಕಾಶ ನೀಡಿದ್ದರಿಂದ ಒಂದಷ್ಟು ಮಂದಿ ಗೊಂದಲಕ್ಕೊಳಗಾಗಿದ್ದರು. ಮುಂಗಡ ಟಿಕೆಟ್ ಕಾದಿರಿಸಿದ್ದ ಹಲವರಿಗೆ ವಾಪಸ್ ಬರಲು ಟಿಕೆಟ್ ಸಿಕ್ಕಿರಲಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಟಿಕೆಟ್ ಬುಕಿಂಗ್ ಬಗ್ಗೆ ಸಣ್ಣ ಪುಟ್ಟ ಗೊಂದಲವಿದ್ದರೂ ಎಲ್ಲವೂ ಸರಿಯಾಗಲಿದೆ. ರಿಟರ್ನ್ ಟಿಕೆಟ್ ಆನ್ಲೈನ್ ನಲ್ಲಿ ವ್ಯವಸ್ಥೆಯಾಗಿತ್ತು. ಇದಲ್ಲದೆ ಇನ್ನೊಂದು ವಿಶೇಷ ರೈಲು ವ್ಯವಸ್ಥೆಗೆ ಮನವಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.



















