
ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೂ ಈ ಬಾರಿ ಸುಪ್ರೀಂ ಕೋರ್ಟ್ ನಿಯಮದ ಬಿಸಿ ತಟ್ಟಿದೆ. ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಸಂಬಂಧಪಟ್ಟವರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಾಗಿ ಬಹುವರ್ಷಗಳಿಂದ ಹಗಲಿರುಳು 5 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿದ್ದ ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರಿನ ಜಾತ್ರೆ ಸಡಗರಕ್ಕೂ ತಡೆಯಾಗಿದೆ. ಮುಖ್ಯವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಡಕಾಗಿದೆ. ಈ ಬಾರಿ ಅತ್ತೂರು ಸುತ್ತಮುತ್ತ ಸುಮಾರು 400 ಸ್ಟಾಲ್ಗಳು ಬಾಡಿಗೆ ಆಧಾರದ ಮೇರೆಗೆ ತೆರೆದಿದೆ. ಅಮ್ಯೂಸ್ಮೆಂಟ್ ಸೇರಿದಂತೆ ಮನೋರಂಜನೆಗಾಗಿ ಒಂದಷ್ಟು ಕೇಂದ್ರಗಳಿವೆ. ರಾತ್ರಿ 10 ಗಂಟೆಯ ಬಳಿಕ ಪೊಲೀಸರು ಧ್ವನಿವರ್ಧಕಕ್ಕೆ ಬ್ರೇಕ್ ಹಾಕುವುದರಿಂದ ಸ್ಟಾಲ್ಗಳನ್ನು ಬಾಡಿಗೆಗೆ ಪಡೆದವರು ವ್ಯಾಪಾರ ಕುಂಠಿತದಿoದಾಗಿ ಕಂಗಾಲಾಗಿದ್ದಾರೆ. ಈ ಹಿಂದೆ ಮುಂಜಾನೆವರೆಗೂ ಜನ ವಿರಳವಾಗುವಲ್ಲಿ ತನಕ ಅಂಗಡಿ ಮುಂಗಟ್ಟುಗಳು ತೆರೆದಿರುತ್ತಿದ್ದವು.
ಅತ್ತೂರಿಗೆ ಬರುವ ಭಕ್ತರ ಭದ್ರತೆ ಹಾಗೂ ಸುರಕ್ಷತೆಗಾಗಿ ಕಳೆದ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಡಿವೈಎಸ್ಪಿ, ಸಿಪಿಐ, 8 ಪಿಎಸ್ಐ, 200 ಮಂದಿ ಸಿವಿಲ್ ಪೊಲೀಸ್, 100 ಡಿಎಆರ್ ತುಕಡಿ, 50 ಮಂದಿ ಗೃಹ ರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುಮಾರು 64 ಕಡೆ ಸಿಸಿಟಿವಿ ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 30 ಮಂದಿ ಪೊಲೀಸರು, 50 ಸೆಕ್ಯೂರಿಟಿ ಗಾರ್ಡ್ ಮತ್ತು 40 ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಅದು ಕೂಡ ಪಾವತಿ ಆಧಾರದ ಮೇಲೆಯೇ ಎನ್ನುವುದು ವಿಶೇಷ. ಡಾ. ಅರುಣ್ ಅವರು ಉಡುಪಿ ಜಿಲ್ಲಾ ಎಸ್ಪಿ ಆದ ಬಳಿಕ ಜಿಲ್ಲೆಯಲ್ಲಿ ಹೆಚ್ಚಿನ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆ. ಪೊಲೀಸರು ಕೂಡಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.





















