
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿದೆ.
ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಎಂಬವರ ಮೃತದೇಹಗಳು ಮುರುಡೇಶ್ವರದ ನವೀನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರದಲ್ಲಿ ಎರಡು ಹಾಗೂ ಅಳವೆ ಕೋಡಿಯಲ್ಲಿ ಒಂದು ಪತ್ತೆಯಾಗಿವೆ.
ಮಂಗಳವಾರ ಕೋಲಾರ ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿದ್ದು ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಏಳು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. ಆ ಪೈಕಿ ಮೂವರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ರೆ, ಶ್ರಾವಂತಿ ಎಂಬಾಕೆ ಸಾವನ್ನಪ್ಪಿದ್ದಳು.
ದೀಕ್ಷಾ, ಲಾವಣ್ಯ, ವಂದನಾ ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದು ಇದೀಗ ಅವರ ಮೃತ ದೇಹ ಪತ್ತೆಯಾಗಿದೆ.



















