
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ನಗರದ ಫ್ರೀಡಂ ಪಾರ್ಕ್ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಇದರ ಬೆನ್ನಲ್ಲೇ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೈಯ್ಯದ್ ಅಬ್ಬಾಸ್ ಎಂಬವರು ಸ್ವಾಮೀಜಿ ವಿರುದ್ಧ ದೂರು ನೀಡಿದ್ದು ಬಿಎನ್ಎಸ್ ಸೆಕ್ಷನ್ 299 (ಯಾವುದೇ ಧರ್ಮವನ್ನು ಅಪಮಾನಗೊಳಿಸಿ ಅವರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟುಮಾಡುವ ಉದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯ) ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಉಲ್ಲೇಖವಾಗಿರುವ ಅಂಶ:
ಭಾರತ ದೇಶದ ಪ್ರಜೆಗಳಾದ ನಾವು, ಸಂವಿಧಾನ ಬದ್ದರಾಗಿ ಈ ದೇಶದಲ್ಲಿ ಜೀವನ ಚರಿತ್ರೆ ಮಾಡುತ್ತಿದ್ದೇವೆ. ಆದರೆ ಚಂದ್ರಶೇಖರ ಸ್ವಾಮೀಜಿ ಅವರು ಮುಸ್ಲಿಂ ಧರ್ಮದವರನ್ನು ಗುರಿಯಾಗಿಸಿಕೊಂಡು ಅವರ ಭಾವನೆಗಳಿಗೆ ನೋವುಂಟಾಗುವಂತೆ ಮತ್ತು ಎಲ್ಲಾ ಮುಸ್ಲಿಂ ಜನಾಂಗದವರನ್ನು ಶತ್ರು ದೇಶದವರಿಗೆ ಹೋಲಿಸಿ ಮಾತನಾಡುವ ಮೂಲಕ ಜನರಿಗೆ ಅವಮಾನ ಮಾಡಿರುತ್ತಾರೆ. ಜಾತಿ ಜಾತಿಗಳ ನಡುವೆ ಮತೀಯ ದ್ವೇಷ, ವೈರತ್ವ, ವೈಮನಸ್ಸು ಹುಟ್ಟುವಂತೆ ಪ್ರಚೋದಿಸಿ, ಪ್ರಚೋದನಕಾರಿ ಭಾಷಣ ಮಾಡಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.



















