
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ಅದೇನೆಂದರೆ ಮೃತಪಟ್ಟ ಕೂಲಿ ಕಾರ್ಮಿಕನ ಶವವನ್ನು ಮಾಲೀಕ ರಸ್ತೆ ಬದಿ ಮಲಗಿಸಿ ಹೋದ ಘಟನೆ ಕಳೆದ ಶನಿವಾರ ನಡೆದಿದೆ.
ಪುತ್ತೂರು ಚಿಕ್ಕಮೂಡ್ನೂರು ಗ್ರಾಮದ ಶಿವಪ್ಪ(70 ) ಮೃತಪಟ್ಟ ಕಾರ್ಮಿಕನಾಗಿದ್ದು ಸಾಲ್ಮರ ತಾವ್ರೋ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಹೆನ್ರಿ, ಗಾರೆ ಕೆಲಸಕ್ಕೆ ಕಾರ್ಮಿಕ ಶಿವಪ್ಪರನ್ನು ಕರೆಸಿಕೊಂಡಿದ್ದ. ಆದರೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನ ಪಿಕ್ ಅಪ್ ವಾಹನದಲ್ಲಿ ತಂದು ಕುಟುಂಬದವರಿಗೆ ಮಾಹಿತಿ ನೀಡದೆ ಮನೆಯ ಪಕ್ಕದಲ್ಲೇ ಇರಿಸಿ ಹೋಗಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿದ್ದ ಶಿವಪ್ಪ ಮೃತದೇಹವನ್ನು ಮಗಳು ಹಾಗೂ ಪತ್ನಿ ಗಮನಿಸಿದ್ದಾರೆ.
ಮೃತಪಟ್ಟಾಗ ಶಿವಪ್ಪನನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗದೆ ಮನೆಯವರಿಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದು ಹೀಗಾಗಿ ಈ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಆರೋಪಿ ಹೆನ್ರಿ ತಲೆ ಮರೆಸಿಕೊಂಡಿದ್ದು, ಮಾಲೀಕನನ್ನ ಬಂಧಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ. ಇಂದು ಸಂಜೆಯೊಳಗೆ ಬಂಧಿಸದೇ ಇದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ ನೀಡಿದ್ದಾರೆ.



















