ಅಹಿತಕರ ಘಟನೆಗಳು ನಡೆಯದಂತೆ ಬಸ್ಸು ಮಾಲಕರಿಗೆ ಎಚ್ಚರಿಕೆ

ನಿಟ್ಟೆಯ ವಿದ್ಯಾ ಸಂಸ್ಥೆಯಲ್ಲಿ ತನ್ನ 2ನೇ ವರ್ಷದ ಬಿಎಸ್ಸಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿ ಜನಿತ್ ಶೆಟ್ಟಿಯವರು ದಿ ಸೆ:21 ರಂದು ಬೆಳಗ್ಗೆ ಸಾರ್ವಜನಿಕ ಬಸ್ ಮುಖಾಂತರ ಕಾಲೇಜಿಗೆ ಬರುವಂತಹ ಸಂದರ್ಭದಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲದೆ ಬಸ್ಸಿನ ಫ್ಯೂಟ್ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಸಂದರ್ಭ ಕೈ ಜಾರಿ ಬಿದ್ದು ಅದೇ ಬಸ್ಸಿನ ಟಯರಿಗೆ ಸಿಲುಕಿ ದುರ್ಮರಣ ಹೊಂದಿ ಸುಮಾರು ಒಂದು ತಿಂಗಳು ಕಳೆದಿದೆ.
ಈ ಘಟನೆ ನಡೆದ ತಕ್ಷಣವೇ ಎಬಿವಿಪಿ ಇದನ್ನು ಖಂಡಿಸಿ ಈ ಮಾರ್ಗವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಸ್ಥಳೀಯಾಡಳಿತಕ್ಕೆ ಆಗ್ರಹಿಸಿತ್ತು. ನಂತರ ಎಬಿವಿಪಿ ನಿಯೋಗವು ಉಡುಪಿ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿರ್ವಹಣಾಧಿಕಾರಿ ಹಾಗೂ ಆರ್.ಟಿ.ಓ ಜಿಲ್ಲಾ ಅಧಿಕಾರಿಯವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಚರ್ಚಿಸಿತ್ತು ಮತ್ತು ಕಾರ್ಕಳ ತಹಶೀಲ್ದಾರರಲ್ಲಿ ಈ ಕುರಿತು ಒಂದು ಸಮನ್ವಯ ಸಭೆಯನ್ನು ನಡೆಸುವಂತೆ ಆಗ್ರಹಿಸಿತ್ತು.
ಇಂದು ದಿ: ಸೆ 18 ರಂದು ಕಾರ್ಕಳ ತಾಲೂಕು ಕಚೇರಿಯಲ್ಲಿ ಈ ಸಭೆಯು ನಡೆಯಿತು ಇದರಲ್ಲಿ ಕಾರ್ಕಳ ತಹಶೀಲ್ದಾರರು, ತಾಲೂಕು ಪಂಚಾಯತ್ ಸದಸ್ಯರು, ಸಿಸಿಟಿ ಉಪಾಧ್ಯಕ್ಷರು, ವಿಶಾಲ್ ಮೋಟಾರ್ಸ್, ದುರ್ಗಾ ಮೋಟಾರ್ಸ್, ಶ್ರೀದೇವಿ, ರಶ್ಮಿ, ನವೀನ್ ಸೇರಿದಂತೆ ವಿವಿಧ ಬಸ್ ಮಾಲೀಕರು, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿರ್ವಹಣಾಧಿಕಾರಿ, ನಿಟ್ಟೆ ಕಾಲೇಜು ಆಡಳಿತ ಮಂಡಳಿ, ಆರ್.ಟಿ.ಓ ಅಧಿಕಾರಿ, ಪೊಲೀಸ್ ಉಪಾಧಿಕ್ಷಕರು ಹಾಗೂ ನಿರೀಕ್ಷಕರು ಭಾಗವಹಿಸಿದ್ದರು.ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ ಸಭೆಯಲ್ಲಿ ಪ್ರತಿನಿಧಿಸಿ ಉಡುಪಿ ಕಾರ್ಕಳ ಮಂಗಳೂರಿನಿಂದ ನಿಟ್ಟೆಗೆ ಸಂಪರ್ಕಿಸುವ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚರಿಸಬೇಕು ಎಂದು ಬೇಡಿಕೆಯನ್ನು ಇರಿಸಿದರು ಹಾಗೂ ಅದಕ್ಕೆ ಮನ್ನಣೆಯೂ ದೊರಕಿತು. ಹಾಗೂ ಪ್ರತಿಯೊಂದು ಖಾಸಗಿ ಬಸ್ ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಶ್ರೇಯಸ್ ಅಂಚನ್ ಹಾಗೂ ಧನುಷ್ ಉಪಸ್ಥಿತರಿದ್ದರು.













