
ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ವಿಘ್ನ ವಿನಾಯಕನ ಹಬ್ಬ ಆಚರಣೆಗೆ ವಿಘ್ನವೊಂದು ಎದುರಾಗಿದ್ದು ಅದೇನೆಂದರೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಿತ್ರ ವಿಚಿತ್ರ ನೀತಿ ನಿಯಮ ಹೇರುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಹಲವು ವರ್ಷಗಳಿಂದ ಆಚರಿಸಲಾಗುತ್ತಿದ್ದು ಈ ಹಿಂದೆ ಇಲ್ಲದಂತಹ ಹೊಸ ನಿಯಮವನ್ನು ಮಾಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿರುವ ಆಹ್ವಾನಿತರ ಹೆಸರು ಮತ್ತು ಫೋನ್ ನಂಬರ್ ಕೊಡಬೇಕಂತೆ. ಅತಿಥಿಗಳ ನಂಬರ್, ಹೆಸರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅವಶ್ಯಕತೆ ಇಲ್ಲ. ಏನೇ ಹೆಚ್ಚು ಕಮ್ಮಿ ಆದರೂ ಗಣೇಶೋತ್ಸವ ಸಮಿತಿ ಇರುತ್ತೆ. ಸಮಿತಿಯವರನ್ನು ಪ್ರಶ್ನೆ ಮಾಡಬಹುದು. ಶೋಭಯಾತ್ರೆಯಲ್ಲಿ ಸಾಗುವ ಟ್ಯಾಬ್ಲೋ ಯಾವುದು? ವಾಹನದ ಮಾಲೀಕ ಯಾರು?ದಾಖಲೆ, ವಾಹನ ದಾಖಲೆ, ಚಾಲಕನ ದಾಖಲೆ ಬೇಕಂತೆ. ಈ ದಾಖಲೆ ಹಿಡಿದುಕೊಂಡು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಕೊಡಬೇಕಂತೆ. ಯಾವ ಯಾವ ಟ್ಯಾಬ್ಲೋ ಬರುತ್ತೆ ಎಂದು ಮೊದಲೇ ಗೊತ್ತಾಗಲ್ಲ. ಇಲ್ಲಿವರೆಗೂ ಇದನ್ನೆಲ್ಲಾ ಕೇಳಿರಲಿಲ್ಲ. ಆದ್ರೆ ಈ ವರ್ಷ ಯಾಕೆ ಕೇಳ್ತಿದ್ದಾರೆ?.
ಸಮಿತಿಯವರು ಹತ್ತಾರು ಬಾರಿ ಪೊಲೀಸ್ ಸ್ಟೇಷನ್ ಗೆ ಅಲೆಯುತ್ತಿದ್ದಾರೆ. ಈ ಹೊಸ ನಿಯಮಗಳ ಜಾರಿಗೆ ಬಿಜೆಪಿ ಖಂಡಿಸುತ್ತೆ. ಹಿಂದೂ ಸಮಾಜದ ಧಾರ್ಮಿಕ ಆಚರಣೆಗೆ ತೊಂದ್ರೆ ಮಾಡೋದು ಕಾಂಗ್ರೆಸ್ ಸರ್ಕಾರದ ಡಿಎನ್ಎನಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ತೊಂದರೆ ಆಗಿರಲಿಲ್ಲ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಕಡಿಮೆ ಆಗಬೇಕು. ಹಿಂದೂ ಆಚರಣೆಗಳಿಗೆ ತೊಂದ್ರೆ ಕೊಡಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಕಮೀಷನರೇಟ್ ಹಾಗೂ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆಯುತ್ತೆ. ಈ ನಿಯಮಗಳನ್ನು ಯಾರು ಸಹ ಪಾಲಿಸಬೇಡಿ. ಸರ್ಕಾರ ಏನು ಬೇಕಾದರೂ ಹೇಳಲಿ. ನೂರು ಬಾರಿ ಓಡಾಡಿ ಕಷ್ಟ ಅನುಭವಿಸಬೇಕೆಂದು ದಾಖಲೆ ಸಂಗ್ರಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಈ ನಿಯಮ ಮಾಡಿದೆ. ಸಡಿಲಿಕೆ ಮಾಡದೇ ಇದ್ದರೆ ಕಳೆದ ವರ್ಷದಂತೆ ಮಾಡಿ. ಯಾವುದೇ ಇಲಾಖೆಯವರು ಬಂದರೂ ನಾವು ನಿಮ್ಮ ಜೊತೆ ಇದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.













