
ಬೀದರ್: ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೊಸ ವರ್ಷ 2026ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. ಆಧುನಿಕ ಜಗತ್ತಿನಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸದಾ ಎಚ್ಚರಿಕೆ ನೀಡುತ್ತಿರುವ ಕೋಡಿಶ್ರೀಗಳು, 2026ರಲ್ಲಿ 2025ಕ್ಕಿಂತ ಹತ್ತು ಪಟ್ಟು ಹೆಚ್ಚಿನ ಅಪಾಯಗಳ ಸೂಚನೆ ಇದೆ ಎಂದು ಎಚ್ಚರಿಸಿದ್ದಾರೆ.
ಹೊಸ ವರ್ಷದ ಆರಂಭದಲ್ಲೇ ಕೋಡಿಶ್ರೀಗಳು, ಜಾಗತಿಕ ಮಟ್ಟದಲ್ಲಿ ಭಾರೀ ಅಪಾಯಗಳು ಎದುರಾಗುವ ಲಕ್ಷಣಗಳಿದ್ದು ಜಗತ್ತಿನಾದ್ಯಂತ ನೀರು ಹಾಗೂ ಬೆಂಕಿಯಿಂದ ಲಕ್ಷಾಂತರ ಜನ ಸಾವನ್ನಪ್ಪಿರುವ ಘಟನೆಗಳ ಬಳಿಕ, ಅನೇಕ ಆತ್ಮಗಳಿಗೆ ಸರಿಯಾಗಿ ಸಂಸ್ಕಾರ ಆಗಿಲ್ಲ. ಆ ಆತ್ಮಗಳು ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ಅಪಾಯ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮನುಕುಲಕ್ಕೆ ಗಂಭೀರ ಅಪಾಯ ಎದುರಾಗಲಿದೆ ಎಂದ ಕೋಡಿಶ್ರೀಗಳು, ಜನರಲ್ಲಿ ಏಕಾಂಗಿತನ, ಮಾನಸಿಕ ಸ್ಥೈರ್ಯ ಕುಸಿತ, ಅಸಹಜ ವರ್ತನೆ, ಅಚಾನಕ್ ಅಸ್ವಸ್ಥತೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶರೀರದ ಅಂಗಾಂಗಗಳಲ್ಲಿ ವಿವಿಧ ವ್ಯತ್ಯಾಸಗಳು ಉಂಟಾಗಬಹುದು ಎಂದು ಹೇಳಿದ್ದಾರೆ.
ರಾಜ್ಯದ ಸ್ಥಿತಿಗತಿಗಳ ಕುರಿತು ಮಾತನಾಡಿದ ಅವರು, 2026ರಲ್ಲಿ ಕರ್ನಾಟಕದಲ್ಲಿ ಒಳ್ಳೆಯ ಬೆಳವಣಿಗೆ ಲಕ್ಷಣಗಳು ಕಾಣುತ್ತಿದ್ದು, ಮಳೆ–ಬೆಳೆ ಉತ್ತಮವಾಗಿರಲಿದೆ ಎಂದರು. ಆದರೆ ಇದೇ ವೇಳೆ ಜಲ ಗಂಡಾಂತರದ ಅಪಾಯವೂ ಇರುವುದಾಗಿ ಎಚ್ಚರಿಕೆ ನೀಡಿದ್ದಾರೆ.
2026ರಲ್ಲಿ ಜಾಗತಿಕವಾಗಿ ದೊಡ್ಡ ಸಮಸ್ಯೆಗಳು ಎದುರಾಗಲಿದ್ದು, ಕೆಲವು ದೇಶಗಳು ನಾಶವಾಗುವ ಸೂಚನೆಗಳಿವೆ. ಮಳೆ, ಬೆಂಕಿ ಸೇರಿದಂತೆ ಪಂಚಭೂತಗಳಿಂದ ಸಂಕಷ್ಟಗಳು ಹೆಚ್ಚಾಗಲಿದ್ದು ಸಾವು–ನೋವು ಹಾಗೂ ದುಃಖ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.



















