ಪ್ರಕಟಣೆ ಹೊರಡಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಂಡಳಿ

ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 16 ರಿಂದ ಡಿ. 2 ರ ತನಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದ್ದು ಈ ಹಿನ್ನೆಲೆ ನ. 14 ರಿಂದ ಡಿ. 02 ರ ತನಕ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ನೆರೆವೇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯು ಪ್ರಕಟಣೆ ಹೊರಡಿಸಿದೆ.
ನವೆಂಬರ್ 15 ರಂದು ಏಕಾದಶಿ ಹಾಗೂ ಮೂಲಮೃತ್ತಿಕಾ ಪ್ರಸಾದ ವಿತರಣೆ ನಡೆಯಲಿದ್ದು ನವೆಂಬರ್ 16ರಂದು ಕೊಪ್ಪರಿಗೆ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ನವೆಂಬರ್ 14ರಿಂದಲೇ ಸರ್ಪ ಸಂಸ್ಕಾರ ಸೇವೆ ತಾತ್ಕಾಲಿಕವಾಗಿ ರದ್ದುಗೊಳ್ಳಲಿದ್ದು ಮತ್ತೆ ಡಿಸೆಂಬರ್ 3ರಿಂದ ಪುನರಾರಂಭಗೊಳ್ಳಲಿದೆ. ಜಾತ್ರೆ ಮತ್ತು ಪ್ರಮುಖ ದಿನಗಳನ್ನು ಬಿಟ್ಟು ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷ ಸೇವೆ, ಕಾರ್ತಿಕ ಪೂಜೆ, ಮಹಾಪೂಜೆ, ತುಲಾಭಾರ, ನಾಗ ಪ್ರತಿಷ್ಠೆ, ಉತ್ಸವ ರಥೋತ್ಸವ ಮುಂತಾದ ಸೇವೆಗಳು ನಡೆಯಲಿದೆ.
ನ. 19 ರಂದು ಲಕ್ಷದೀಪೋತ್ಸವ, ನ. 24ರಂದು ಚೌತಿ, ನ.25 ರಂದು ಪಂಚಮಿ ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ನ. 26 ಚಂಪಾಷಷ್ಠಿ ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ ಮತ್ತು ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆಗಳು ಆ ದಿನ ಇರುವುದಿಲ್ಲ ಎಂದು ದೇವಸ್ಥಾನವು ಪ್ರಕಟಣೆಯಲ್ಲಿ ತಿಳಿಸಿದೆ.






















































