
ಬೆಂಗಳೂರು: ನಿರಂತರ ಮಳೆಯಿಂದ ತಗ್ಗು ಪ್ರದೇಶ, ರಾಜಕಾಲುವೆ, ಕೆರೆಯ ಆಸುಪಾಸಿನ ಜಾಗಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾದ ಬೆನ್ನಲ್ಲೇ ಬಿಬಿಎಂಪಿ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ.
ಅತಿಯಾದ ಮಳೆಯಿಂದ ಕಾಲರಾ, ಜಾಂಡಿಸ್, ಡೆಂಘೀ, ಕರುಳಬೇನೆ, ಚಿಕನ್ ಗುನ್ಯಾ ಮಲೇರಿಯಾ ರೋಗಗಳ ಆತಂಕ ಎದುರಾಗಿದ್ದು ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಅದೇಶ ನೀಡಲಾಗಿದೆ. ಅರ್ ಅರ್ ನಗರ, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ ವಲಯಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಮಾರ್ಗ ಸೂಚಿಯಲ್ಲಿ ಪ್ರಕಟವಾದ ಮುಖ್ಯಾಂಶ:
- ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ನೀಡುವುದು ಕಡ್ಡಾಯ.
- ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು (ಫ್ರೂಟ್ ಬೌಲ್) ಮಾರಾಟ ನಿಷೇಧ.
- ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಹಾಲೋಜೆನ್ ಮಾತ್ರೆಗಳನ್ನು ನೀಡಬೇಕು.
- ನೆರೆ ಪೀಡಿತ ಪ್ರದೇಶ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಬೇಕು.
- ಪ್ರತಿ ವಾರ್ಡ್ ಗಳ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆಗಳಲ್ಲಿ ಔಷಧಿ ಸಿಗುವಂತೆ ಕ್ರಮ.
- ತುರ್ತು ಪರಿಸ್ಥಿತಿ ನಿಭಾಯಿಸಲು ಪಾಲಿಕೆಯ ಎಲ್ಲಾ ಸಿಬ್ಬಂದಿ ಸನ್ನದ್ಧರಾಗಿರಬೇಕು.
- ನೀರು ಸಂಗ್ರಹಿಸುವ ಟ್ಯಾಂಕರ್ ಗಳನ್ನು ಶುದ್ಧಗೊಳಿಸಿ ಅಗತ್ಯಕ್ಕೆ ತಕ್ಕಂತೆ ಸಿಗುವಂತೆ ನೋಡಿಕೊಳ್ಳಬೇಕು.
















































