
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಚಿಕಿತ್ಸೆ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ‘ಆಯುಷ್ಮಾನ್ ಭಾರತ್–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ ಹಾಗೂ ‘ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಯೋಜನೆಗಳಡಿ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಲ್ಲಿನ ಸೋಂಕು ಮತ್ತು ಉರಿಯೂತಕ್ಕೆ ಪರಿಣಾಮಕಾರಿ ಚಿಕಿತ್ಸೆ ಆಗಿರುವ ಆರ್ಸಿಟಿ ವೆಚ್ಚ ಹೆಚ್ಚು ಇರುವುದರಿಂದ ಹಲವರು ಹಲ್ಲು ತೆಗೆಸಿಕೊಳ್ಳುವುದನ್ನೇ ಆಯ್ಕೆ ಮಾಡುತ್ತಿದ್ದರು. ಇದೀಗ ಯೋಜನೆಗೆ ಸೇರ್ಪಡೆಯಿಂದ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ.
ಮುಂಭಾಗ ಹಾಗೂ ಹಿಂಭಾಗದ ಹಲ್ಲುಗಳಿಗೆ ಈ ಚಿಕಿತ್ಸೆಯನ್ನು ‘ಸಂಕೀರ್ಣ ದ್ವಿತೀಯ ಕಾರ್ಯವಿಧಾನ’ವಾಗಿ ವರ್ಗೀಕರಿಸಿದ್ದು, ಪ್ಯಾಕೇಜ್ ದರವನ್ನು ಕ್ರಮವಾಗಿ ₹1,360 ಮತ್ತು ₹2,040 ಎಂದು ನಿಗದಿ ಮಾಡಲಾಗಿದೆ. ಯೋಜನೆ ಜಾರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಜವಾಬ್ದಾರಿ ನೀಡಲಾಗಿದೆ.








