
ಬೆಂಗಳೂರು : ಸೋಮವಾರ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯುಪಿಐ ಮೂಲಕ ಮಿತಿಗಿಂತ ಹೆಚ್ಚಿನ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ ನ ಜೊತೆಗೆ ಜು.25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
‘ಎಲ್ಲ ಸಣ್ಣ ವ್ಯಾಪಾರಿ, ಅಂಗಡಿಗಳ ಮಾಲೀಕರು ಜು.23, 24ರಂದು ಹಾಲು, ಬೇಕರಿ ಉತ್ಪನ್ನ, ಬೀಡಿ, ಸಿಗರೇಟು ಮಾರಾಟ ಬಂದ್ ಮಾಡಲಿದ್ದಾರೆ. ಕಾರ್ಮಿಕರೂ ಕೂಡ ಕಪ್ಪುಪಟ್ಟಿ ಧರಿಸಿ ಹಾಲು, ಕಾಫಿ, ಚಹಾ, ಬೇಕರಿ ಉತ್ಪನ್ನ ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ.
ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಿರುವ ಹಿಂದೆ ರಾಜ್ಯ, ಕೇಂದ್ರ ಸರ್ಕಾರದ ಪಾತ್ರವಿದೆ. ಡಿಜಿಟಲ್ ವಹಿವಾಟಿನ ಯಶಸ್ಸಿಗೆ ಕಾರಣರಾದ ಸಣ್ಣ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗುತ್ತಿದೆ. ಹಣ್ಣು, ತರಕಾರಿ, ಹೂವಿನ ಮಾರಾಟ ಮಾಡುವವರಿಗೆ ತೆರಿಗೆ ನೋಟಿಸ್ ನೀಡಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿ ನೋಟಿಸ್ ನೀಡಲಾಗಿದೆ. ರಾಜ್ಯದ ಬಿಜೆಪಿಗರಿಗೆ ಸಣ್ಣ ವ್ಯಾಪಾರಿಗಳ ಮೇಲೆ ಗೌರವ ಇದ್ದರೆ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ತಮಗೆ ಬೇಡ ಎಂದು ಹೇಳಿಸಲಿ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.