
ಅರಸೀಕೆರೆ: ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವವಾಗುವ ಲಕ್ಷಣ ಗೋಚರಿಸುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ನಿರೀಕ್ಷೆಗೂ ಮೀರಿದ ದುಃಖ ಭಾರತಕ್ಕೆ ಬರಲಿದೆ. ಮೇಘ ಸ್ಫೋಟ, ಯುದ್ಧದ ಜತೆಗೆ ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದ್ದು, ಇದು ರಾಜ್ಯಕ್ಕೂ, ದೇಶಕ್ಕೂ ಕಾಡಲಿದೆ. ಈ ಹಿಂದೆ ಎರಡ್ಮೂರು ಪ್ರಧಾನಮಂತ್ರಿಗಳು ಕೊಲೆ ಆಗ್ತಾರೆ ಅಂದಿದ್ದೆ. ಅದು ಈಗ ಆಗಿದೆ. ಸಾಗರದಲ್ಲಿ ಒಂದು ಜಲಸ್ಫೋಟ ಎಂದಿದ್ದೆ ಅದೂ ಆಗಲಿದೆ. ಯುದ್ಧ ನಿಲ್ಲೋದು ಸಂವತ್ಸರ ಪರ್ವದಲ್ಲಿ ಕಷ್ಟ. ದ್ವೇಷ, ಅಸೂಯೆಗಳ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ. ಕೆಲ ದೇಶಗಳು ಮುಳುಗುತ್ತವೆ, ಕೆಲವು ಏಳುತ್ತವೆ. ಕೊರೋನಾ ಇನ್ನೊಂದು ರೂಪ ತಾಳಲಿದೆ. ಅಕಾಲದಲ್ಲಿ ಮಳೆ ಬಂದರೆ, ಸಕಾಲದಲ್ಲಿ ತೊಂದರೆ ಆಗಲಿದೆ. ಈ ಬಾರಿ ಮಳೆ ಚೆನ್ನಾಗಿ ಆಗಲಿದೆ. ಆದರೆ, ಜಲಸ್ಫೋಟದ ಜತೆಗೆ ವಾಯು, ಭೂ ಪ್ರಳಯವಾಗುತ್ತದೆ ಎಂದು ತಿಳಿಸಿದ್ದಾರೆ.






















































