
ಬೆಂಗಳೂರು: ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಬ್ರಿ ತಾಲೂಕು ಮುದ್ರಾಡಿಯ ಮಂಜುನಾಥ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಮಂಜುನಾಥ್ ಪೂಜಾರಿ ಅವರು ಕಳೆದ ಮೂರು ದಶಕಗಳಿಂದ ನಿಷ್ಠಾವಂತರಾಗಿ ಪಕ್ಷದ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಡೀಮ್ಡ್ ಫಾರೆಸ್ಟ್ ಕುರಿತಾಗಿ ಜನಪರ ಹೋರಾಟ ಮಾಡಿರುವ ಅವರು ಗ್ರಾಮೀಣ ಭಾಗದ ಜನರ ಸಹಾಯಕ್ಕಾಗಿ ಸಹಕಾರ ಸಂಘ ಸ್ಥಾಪಿಸಿದ್ದರು. ರಾಜಕೀಯವಾಗಿ ಮಾತ್ರವಲ್ಲದೆ ಧಾರ್ಮಿಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡ ಮಂಜುನಾಥ್ ಪೂಜಾರಿ ಅವರು ಮುದ್ರಾಡಿ ಗ್ರಾಮ ಪಂಚಾಯಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಗುರುತಿಸಿಕೊಂಡ ಮಂಜುನಾಥ್ ಪೂಜಾರಿ ಅವರು ಹೆಬ್ರಿ ತಾಲೂಕು ರಚನೆಗಾಗಿ ನಡೆದ ಹೋರಾಟದಲ್ಲೂ ಅವರ ಪಾತ್ರ ಪ್ರಮುಖವಾಗಿದೆ.






















































