
ದಿನಾಂಕ 28 ಸೆಪ್ಟೆಂಬರ್ 2025ರ ರಾತ್ರಿ 2 ಗಂಟೆ 15 ನಿಮಿಷಕ್ಕೆ, ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಬೆದರಿಕೆ ಹಾಕಿ, ಕೊಟ್ಟಿಗೆಯಲ್ಲಿದ್ದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ಕಳವು ಮಾಡಿದ್ದರು.
ಈ ಸಂಬಂಧ ಅಜೆಕಾರು ಠಾಣೆಯಲ್ಲಿ ಹಲವು ಕಾನೂನು ವಿಧಿಗಳಡಿ ಪ್ರಕರಣ ದಾಖಲಾಗಿತ್ತು.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಮಹೇಶ್ ಟಿ.ಎಂ ಅವರ ನೇತೃತ್ವದ ತನಿಖಾ ತಂಡವು ಸೂಕ್ಷ್ಮ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಬಂಧಿತರು — ಕಾರ್ಕಳದ ಮೊಹಮ್ಮದ್ ಯೂನಿಸ್, ಮೂಡುಬಿದ್ರೆಯ ಮೊಹಮ್ಮದ್ ನಾಸೀರ್ ಹಾಗೂ ಮೊಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಎರಡು ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ ಹಾಗೂ ಐದು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ಸುಮಾರು 5 ಲಕ್ಷ 87 ಸಾವಿರ ರೂಪಾಯಿಗಳಷ್ಟಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಹೆಬ್ರಿ, ಸುಜೀತ್ ಕುಮಾರ್ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಶ್ರಮಿಸಿದ್ದಾರೆ.
ಅಜೆಕಾರು ಪೊಲೀಸರು ನಡೆಸಿದ ಶೀಘ್ರ ಕಾರ್ಯಾಚರಣೆಯ ಫಲವಾಗಿ, ದನ ಕಳ್ಳತನ ಪ್ರಕರಣ ಭೇದನೆ ಕಂಡಿದೆ.




















