
ಭಾರತದ ಆರ್ಥಿಕ ಕ್ಷೇತ್ರದ ಮೌನ ಕ್ರಾಂತಿಯ ಹರಿಕಾರ, ವಿಶ್ವಮಾನ್ಯ ಆರ್ಥಿಕ ಹಾಗೂ ಶಿಕ್ಷಣ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ನಿಧನದಿಂದ ದೇಶ ಒಬ್ಬ ಮಹಾ ಅಭಿವೃದ್ಧಿಯ ಸಾಧಕನನ್ನು ಕಳಕೊಂಡಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಮನಮೋಹನ್ ಸಿಂಗ್ ದೇಶದ ಸಮಾಜವಾದಿ ಆರ್ಥ ವ್ಯವಸ್ಥೆಯ ಚಿಂತಕರಲ್ಲಿ ಒಬ್ಬರಾಗಿದ್ದರು.ಆದರೆ ದೇಶದ ಆರ್ಥಿಕತೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ತನ್ನ ಆರ್ಥಿಕ ಉದಾರೀಕರಣ ನೀತಿಯ ಮೂಲಕ ದೇಶದ ಆರ್ಥಿಕತೆಗೆ ಬಂಡವಾಳಶಾಹೀ ಲೇಪನ ಹಚ್ಚಿದ್ದರು. ಇದು ದೇಶದಲ್ಲಿ ಒಂದು ಹಂತದ ಕೈಗಾರಿಕಾ ಕ್ರಾಂತಿಗೆ ಕಾರಣವಾಗಿತ್ತು. ಉದಾರೀಕರಣದ ಫಲಶ್ರುತಿಯಿಂದ ಆಮದು ತೆರಿಗೆ ಕಡಿತಗೊಂಡ ಪರಿಣಾಮ ಮುಖ್ಯವಾಗಿ ಕರಾವಳಿ ಕರ್ನಾಟಕದಲ್ಲಿ ಅದಾಗಲೇ ನೆಲ ಕಚ್ಚಿದ್ದ ಗೇರುಬೀಜ ಉದ್ದಿಮೆ ಮತ್ತೆ ಅಭಿವೃದ್ದಿ ಹೊಂದುವಂತಾಗಿತ್ತು ಎನ್ನುವುದು ಉಲ್ಲೇಖನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




