ಬಜಗೋಳಿ ಜ್ಯೂನಿಯರ್ ಕಾಲೇಜಿನಲ್ಲಿ, ಅಮ್ಮನ ನೆರವು ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ

ಶಿಕ್ಷಣವು ಅತ್ಯುತ್ತಮ ಬಂಡವಾಳ. ಕೇವಲ ಉದ್ಯೋಗ ಪಡೆಯಲು ಮಾತ್ರ ಶಕ್ತಿ ಎಂಬ ನಂಬಿಕೆ ಹಿಂದೆ ಇತ್ತು. ಆದರೆ ಈಗ ಜ್ಞಾನ ಮತ್ತು ಕೌಶಲಕ್ಕಾಗಿ ಓದು ಎಂಬ ಗ್ರಹಿಕೆ ಆರಂಭವಾಗಿದೆ. ವಿದ್ಯಾರ್ಥಿಗಳು ಕೇವಲ ಮಾರ್ಕ್ ಹಿಂದೆ ಹೋಗದೆ ಜ್ಞಾನ ಮತ್ತು ಕೌಶಲಗಳನ್ನು ಪಡೆಯಬೇಕು. ಸಂಸ್ಕೃತಿ ಮರೆತರೆ ಒಂದು ಜನಾಂಗವೇ ಅವನತಿ ಹೊಂದುತ್ತದೆ ಎಂದು ಕೇಮಾರು ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಅವರು ಹೇಳಿದರು.

ಅವರು ಬಜಗೂಳಿ ಜ್ಯೂನಿಯರ್ ಕಾಲೇಜಿನಲ್ಲಿ ಅಮ್ಮನ ನೆರವು ಫೌಂಡೇಶನ್ ಮೂಲಕ ಕೊಡಮಾಡಿದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡುತ್ತಿದ್ದರು. ದಿವಂಗತ ಶಿವಣ್ಣ ಶೆಟ್ಟಿ ದೇಜುಬೆಟ್ಟು ರೆಂಜಾಳ ಅವರ ಹೆಸರಿನಲ್ಲಿ ಅವರ ಮಕ್ಕಳು ಮತ್ತು ಕುಟುಂಬದವರು ಈ ವಿದ್ಯಾರ್ಥಿವೇತನಗಳ ಪ್ರಾಯೋಜಕರಾಗಿದ್ದರು. ಕಾರ್ಕಳ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ಮತ್ತು ಪದವಿಪೂರ್ವ ತರಗತಿಯಲ್ಲಿ 90% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು. ಬಜಗೊಳಿಯ ಅಹಿಂಸಾ ಎನಿಮಲ್ ಕೇರ್ ಟ್ರಸ್ಟಿಗೆ ಅಮ್ಮನ ನೆರವು ಫೌಂಡೇಶನ್ ಮೂಲಕ ಸಹಾಯಧನವನ್ನು ಇದೇ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

ಕಾರ್ಕಳದ ತಹಶೀಲ್ದಾರ್ ಪ್ರದೀಪ್ ಆರ್, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರಲ್ಲಿ ಓರ್ವರಾದ ಡಾಕ್ಟರ್ ಗಣನಾಥ ಶೆಟ್ಟಿ, ಕಾರ್ಕಳ ಬಿಲ್ಲವರ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್, ಕಾರ್ಕಳದ ಗೇರುಬೀಜ ಉದ್ಯಮಿ ಬೋಳ ಪ್ರಸಾದ್ ಕಾಮತ್, ಕಂಬಳ ಕೋಣಗಳ ಮಾಲಕರಾದ ಹೊಸಮಾರು ಸುರೇಶ್ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ವಿದ್ಯಾರ್ಥಿವೇತನಗಳನ್ನು ವಿತರಣೆ ಮಾಡಿದರು.
ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹಾವೀರ್ ಜೈನ್ ಅವರು ಅಧ್ಯಕ್ಷತೆ ವಹಿಸಿದ್ದರು. ಅಮ್ಮನ ನೆರವು ಫೌಂಡೇಶನ್ ಇದರ ಮಾರ್ಗದರ್ಶಕರಾದ ಶಿಕ್ಷಕ ರಾಜೇಂದ್ರ ಭಟ್ ಕೆ ಮತ್ತು ವಸಂತ್ ಎಂ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಜಗೋಳಿ ಶಾಲಾ ಪೂರ್ವವಿದ್ಯಾರ್ಥಿಯಾದ ರಮಾಕಾಂತ್ ಶೆಟ್ಟಿ ಅವರು ಸ್ವಾಮೀಜಿಯವರನ್ನು ಸನ್ಮಾನ ಮಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಕೆ ಪಿ ಲಕ್ಷ್ಮೀನಾರಾಯಣ್ ಮತ್ತು ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಅಭಿನಂದನಾ ಭಾಷಣ ಮಾಡಿದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ಗಣೇಶ್, ಎಸ್ಡಿಎಂಸಿ ಅಧ್ಯಕ್ಷ ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.
ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಅವರು ದಾನಿಗಳನ್ನು ಸ್ಮರಿಸಿದರು. ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

