
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಪರಸ್ಪರ ಒಪ್ಪಿಗೆಯ ಸಂಬಂಧವನ್ನು ಆಧರಿಸಿ ನಂತರ ಅತ್ಯಾಚಾರ ಆರೋಪ ದಾಖಲಿಸುವ ಮೂಲಕ ಕ್ರಿಮಿನಲ್ ಕಾನೂನಿನ ದುರುಪಯೋಗವಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು ಬಳ್ಳಾರಿಯೊಂದರ ಪ್ರಕರಣದಲ್ಲಿ, ವಿವಾಹಿತ ಮಹಿಳೆ ಪರಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಬಳಿಕ ಸಂಬಂಧ ಹದಗೆಟ್ಟ ಕಾರಣಕ್ಕೆ ‘ವಿವಾಹದ ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ’ ಎಂಬ ಆರೋಪವನ್ನು ಮುಂದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದ್ದು ವಿವಾಹಿತ ಮಹಿಳೆ ವಿವಾಹೇತರ ಸಂಬಂಧದಲ್ಲಿದ್ದ ಸಂದರ್ಭದಲ್ಲಿ ವಿವಾಹವಾಗುವ ಅರ್ಹತೆಯೇ ಇಲ್ಲದ ಕಾರಣ, ವಿವಾಹದ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಲಾಗಿದೆ ಎಂಬ ಆರೋಪವನ್ನು ಕಾನೂನುಬದ್ಧವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ವಿವರಗಳನ್ನು ಪರಿಶೀಲಿಸಿದ ಕೋರ್ಟ್, ದೂರುದಾರ ಮಹಿಳೆ ವಿವಾಹದ ಬಳಿಕ ಪರಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದುದು ಸ್ಪಷ್ಟವಾಗಿದ್ದು, ಅದು ಪರಸ್ಪರ ಒಪ್ಪಿಗೆಯ ಸಂಬಂಧವಾಗಿದ್ದ ನಂತರ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ. ವಿವಾಹಕ್ಕೆ ಒತ್ತಡ ತರುವ ಉದ್ದೇಶದಿಂದ ಈ ರೀತಿಯ ಆರೋಪ ಮಾಡಲಾಗಿದೆ ಎಂಬುದನ್ನೂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.
“ಆರೋಪಿಯು ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಂಬಂಧ ಆರಂಭವಾದ ದಿನದಿಂದ ಎಫ್ಐಆರ್ ದಾಖಲಿಸುವ ದಿನಾಂಕದವರೆಗೆ ಮಹಿಳೆ ವಿವಾಹಕ್ಕೆ ಅರ್ಹತೆ ಹೊಂದಿರದ ಹಿನ್ನೆಲೆಯಲ್ಲಿ ಇಂಥ ಭರವಸೆಯನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



















