
ಮೀರತ್: ಸಮಾಜದಲ್ಲಿ ವಿಚ್ಛೇದನವನ್ನು ಇನ್ನೂ ನಕಾರಾತ್ಮಕವಾಗಿ ನೋಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರಿಗೆ ಅದು ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಟೀಕೆಗಳಿಗೆ ಕಾರಣವಾಗುತ್ತದೆ. ಆದರೆ ಕೆಲವು ಕುಟುಂಬಗಳು ಈ ಹಳೆಯ ಮನೋಭಾವವನ್ನು ಮುರಿದು, ಹೊಸದಾಗಿ ಯೋಚಿಸುವ ಉದಾಹರಣೆಗಳನ್ನು ಸೃಷ್ಟಿಸುತ್ತಿವೆ. ಅಂತಹವೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ಬೆಳಕಿಗೆ ಬಂದಿದೆ.
ನಿವೃತ್ತ ನ್ಯಾಯಾಧೀಶರಾದ ಡಾ. ಜ್ಞಾನೇಂದ್ರ ಶರ್ಮಾ ಅವರ ಪುತ್ರಿ ಪ್ರಣಿತಾ ಅವರಿಗೆ ಮೀರತ್ನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದ ಬಳಿಕ, ಕುಟುಂಬವು ಅದನ್ನು ಸಂಭ್ರಮದಿಂದ ಆಚರಿಸಿದೆ. ನ್ಯಾಯಾಲಯದ ಹೊರಗೆ ಡೋಲು-ನಾಗಾರಿಗಳನ್ನು ಬಾರಿಸಿ, ಸಿಹಿ ಹಂಚುವ ಮೂಲಕ ವಿಶೇಷ ರೀತಿಯಲ್ಲಿ ಮಗಳನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿವೆ.
ಸಂಭ್ರಮಾಚರಣೆಯಲ್ಲಿ ಕುಟುಂಬದವರು ಪ್ರಣಿತಾ ಅವರ ಭಾವಚಿತ್ರವಿರುವ ಟೀ-ಶರ್ಟ್ಗಳನ್ನು ಧರಿಸಿದ್ದು ಗಮನಸೆಳೆಯಿತು. “ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ, ಅವಳು ನನ್ನ ಶಕ್ತಿ” ಎಂಬ ಸಂದೇಶದ ಮೂಲಕ ಕುಟುಂಬವು ತಮ್ಮ ಬೆಂಬಲವನ್ನು ಸ್ಪಷ್ಟಪಡಿಸಿದೆ. ಪ್ರಣಿತಾ ಕೂಡ ಕುಟುಂಬದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಪ್ರಣಿತಾ, ತನ್ನ ಸಂಸಾರ ಉಳಿಸಿಕೊಳ್ಳಲು ಬಹಳ ಪ್ರಯತ್ನಿಸಿದ್ದಾಗಿ ಹೇಳಿ, ಸಂಕಷ್ಟದ ಸಂದರ್ಭದಲ್ಲಿ ತಂದೆ ಬೆಂಬಲವಾಗಿ ನಿಂತರು ಎಂದು ತಿಳಿಸಿದ್ದಾರೆ.
ಮಗಳ ನೋವು ಕಡಿಮೆ ಮಾಡುವುದು ಮುಖ್ಯ ಎಂದು ಹೇಳಿದ ಡಾ. ಶರ್ಮಾ, “ಮಗಳು ಯಾವಾಗಲೂ ಹೊರೆ ಅಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಲು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದರು.
2018ರಲ್ಲಿ ಭಾರತೀಯ ಸೇನೆಯ ಮೇಜರ್ ಗೌರವ್ ಅಗ್ನಿಹೋತ್ರಿ ಅವರೊಂದಿಗೆ ಪ್ರಣಿತಾ ವಿವಾಹವಾಗಿದ್ದು, ಬಳಿಕ ಕುಟುಂಬ ಸಮಸ್ಯೆಗಳು ಮತ್ತು ವರದಕ್ಷಿಣೆ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಹಲವು ವೈಯಕ್ತಿಕ ಸಂಕಷ್ಟಗಳ ನಡುವೆಯೂ ಮಗಳ ಆತ್ಮಗೌರವ ಕಾಪಾಡಲು ತಂದೆ ಬೆಂಬಲ ನೀಡಿದ ಈ ಘಟನೆಗೆ ಮೀರತ್ನಲ್ಲಿ ಪ್ರಶಂಸೆ ವ್ಯಕ್ತವಾಗಿದೆ.









