ನಾವು ಎಷ್ಟು ತಿನ್ನುತ್ತೇವೆ ಮುಖ್ಯವಲ್ಲ, ಯಾವ ಗುಣಮಟ್ಟದ ಆಹಾರ ತಿನ್ನುತ್ತೇವೆ ಎನ್ನುವುದು ಮುಖ್ಯ : ರೋಯಿಸನ್ ಪಿಂಟೋ

ವರ್ಧಮಾನ್ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 6.12.2025ರಂದು ನಡೆದ ಬೆಂಕಿ ಬಳಸದೆ ಅಡುಗೆ ತಯಾರಿ ಸ್ಪರ್ಧೆಯು ವಿದ್ಯಾರ್ಥಿಗಳ ಸೃಜನಶೀಲತೆ, ಅಡುಗೆ ತಯಾರಿಕೆಯ ಕೌಶಲ್ಯ ಹಾಗೂ ಸೌಂದರ್ಯ ಪ್ರಜ್ಞೆಯ ಅನಾವರಣಕ್ಕೆ ಅದ್ಭುತ ವೇದಿಕೆಯಾಯಿತು.
ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ನಡೆಸುತ್ತಿರುವ ಶ್ರೀ ರೋಯಿಸನ್ ಪಿಂಟೋ ಆಗಮಿಸಿ ಸಾಂಪ್ರದಾಯಿಕ ಖಾದ್ಯ ತಯಾರಿಸಿ ಎಲ್ಲರಿಗೂ ನೀಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ನಾವು ಎಷ್ಟು ತಿನ್ನುತ್ತೇವೆ ಎನ್ನುವುದು ಮುಖ್ಯವಲ್ಲ ಬದಲಾಗಿ ಯಾವ ಗುಣಮಟ್ಟದ ಆಹಾರ ತಿನ್ನುತ್ತೇವೆ ಅದು ಮುಖ್ಯ ಎಂಬುದಾಗಿ ಹೇಳುತ್ತಾ ಸ್ಪರ್ಧಿಗಳ ಆಹಾರ ತಯಾರಿಕಾ ಕಾರ್ಯ ವೈಖರಿಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಹೃತ್ಪೂರ್ವಕವಾಗಿ ಶ್ಲಾಘಿಸಿದರು.
ತಲಾ ಏಳು ವಿದ್ಯಾರ್ಥಿಗಳನ್ನೊಳಗೊಂಡ 10 ತಂಡಗಳು ಭಾಗವಹಿಸಿ ಭಾರತೀಯ ಸಾ೦ಪ್ರದಾಯಿಕ , ಪೌಷ್ಟಿಕ ಹಾಗೂ ಆರೋಗ್ಯಕರ ತಿಂಡಿ ತಿನಿಸುಗಳು ಹಾಗೂ ಪಾನೀಯಗಳನ್ನು ಬೆಂಕಿ ಬಳಸದೆ ತಯಾರಿಸಿ ಎಲ್ಲರ ಗಮನ ಸೆಳೆದರು. ಖಾದ್ಯಗಳ ರುಚಿ, ಅಲಂಕಾರ, ಸ್ವಚ್ಛತೆ ಹಾಗೂ ಪ್ರಸ್ತುತೀಕರಣ ವೀಕ್ಷಿಸಿದ ಮುಖ್ಯ ಅತಿಥಿಗಳು ಮಕ್ಕಳನ್ನು ಅಭಿನಂದಿಸಿದರು. ಸ್ಪರ್ಧಿಗಳು ತಾವು ತಯಾರಿಸಿದ ಬಗೆ ಬಗೆಯ ಖಾದ್ಯಗಳನ್ನು ಇತರ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿತರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆ, ಆಡಳಿತಾಧಿಕಾರಿ ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.






















































