
ವಿಜಯಪುರ: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರೇ ರೈತರು ಅಹೋರಾತ್ರಿ ಹೋರಾಟ ನಡೆಸಿದ್ದು, ಯಶಸ್ವಿಯಾಗಿ ಮುಂದುವರಿದಿದೆ.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಗಾಂಧಿಚೌಕ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿ ಕಚೇರಿಯ ಎದುರು ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ ಅಹ್ಮದ್ ಬ್ಯಾನರ್ಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಯೇ ಅಡುಗೆ, ಊಟ ಮಾಡಿ ಅಲ್ಲಿಯೇ ಮಲಗಿ ಅಹೋರಾತ್ರಿ ಅನಿರ್ದಿಷ್ಟ ಹೋರಾಟ ಪ್ರಾರಂಭಿಸಿದ್ದಾರೆ. ರಾಜ್ಯ ಸರ್ಕಾರ ಕೇವಲ ಯಾವುದೋ ಒಂದು ಆದೇಶ ಪ್ರತಿ ತೋರಿಸಿ ನಮ್ಮನ್ನ ಯಾಮಾರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೂ ರೈತರ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಈ ಹೋರಾಟಕ್ಕೆ ಜಗ್ಗದಿದ್ದರೆ ಶವಸಂಸ್ಕಾರ, ತಿಥಿ ಕಾರ್ಯಕ್ರಮ, ಕತ್ತೆ ಚಳವಳಿ ಸೇರಿದಂತೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅನ್ನದಾತರ ಪಾಲಿಗೆ ಈ ಬಾರಿ ರಾಜ್ಯ ಸರ್ಕಾರ ಕರಾಳ ದೀಪಾವಳಿಯನ್ನು ಉಡುಗೊರೆಯಾಗಿ ನೀಡಿದೆ. ಇಂದು ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ರೈತರು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಇದು ಅನ್ನದಾತರ ಹೋರಾಟ. ಇದಕ್ಕೆ ಯಾರೇ ಬೆಂಬಲ ನೀಡಿದರು ನಾವು ಸ್ವಾಗತ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.


ಈ ಹೋರಾಟವನ್ನು ಕೈಬಿಡಲು ರಾತ್ರೋರಾತ್ರಿ ಎಡಿಸಿ ಸೋಮಲಿಂಗ ಗೆಣ್ಣೂರ ಬಂದು ರೈತರಿಗೆ ಇಂಡಿ ಎಸಿ ಆದೇಶದ ಕಾಪಿ ತೋರಿಸಿ ಹೋರಾಟ ಕೈ ಬಿಡಲು ಮನವಿ ಮಾಡಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೇರಿದಂತೆ ಪೊಲೀಸ್ ಸಿಬ್ಬಂದಿ ರೈತರಿಗೆ ಹೋರಾಟ ಕೈಬಿಡಲು ಒತ್ತಾಯಿಸಿದರು. ಆದರೆ ರೈತರು ಇದಕ್ಕೆ ಒಪ್ಪದಿದ್ದಾಗ ಡಿಸಿ ಕಚೇರಿ ಎದುರು ಸ್ಥಳ ಖಾಲಿ ಮಾಡಿ ನಿಮಗೆ ಬೇರೆ ಜಾಗ ಕೊಡುತ್ತೇವೆ ಅಲ್ಲಿ ಹೋರಾಟ ಮುಂದುವರೆಸಿ ಎಂದು ತಿಳಿಸಿದರು. ಪೊಲೀಸ್ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟು, ರೈತರು ಇಂದು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.







