
ಬೆಂಗಳೂರು: ದಿನನಿತ್ಯ ಬಳಸುವ ವಸ್ತುಗಳ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ಬಸ್, ಮೆಟ್ರೋ ದರ ಏರಿಕೆ ಬಳಿಕ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಬಿಸಿ ಮುಟ್ಟಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಪ್ರತಿ ಲೀಟರ್ ನಂದಿನಿ ಹಾಲಿನ ದರ 4 ರೂ. ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಿದ್ದು ಈ ಹೊಸ ದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಒಕ್ಕೂಟಗಳು 6-8 ರೂ. ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪಿಸಿದ್ದು ಆದರೆ ಸೋಮವಾರ ನಡೆದ ಸಭೆಯಲ್ಲಿ ಸಿಎಂ ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಆದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು. ಆದ್ರೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ 4 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.
– ನೀಲಿ ಪ್ಯಾಕೆಟ್ ಹಾಲು – 44 ರೂ ನಿಂದ 48 ರೂ
– ಆರೆಂಜ್ ಪ್ಯಾಕೆಟ್ ಹಾಲು – 54 ರೂ. ನಿಂದ 58 ರೂ.
– ಸಮೃದ್ಧಿ ಹಾಲಿನ ಪ್ಯಾಕೆಟ್ 56 ರೂ. ನಿಂದ 60 ರೂ.
– ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ.
– ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ.